ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ/ ಪುನಾರಚನೆ ಹಾಗೂ ನಿಗಮ ಮಂಡಳಿಗಳಿಗೆ ಬಾಕಿ ಉಳಿದ ಬೆರಳೆಣಿಕೆಯಷ್ಟುಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಕುರಿತು ಅಂತಿಮ ನಿರ್ಧಾರವನ್ನು ಕೈಗೊಳ್ಳವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ದೆಹಲಿ ಪ್ರವಾಸ ಮಹತ್ವ ಪಡೆದುಕೊಂಡಿದೆ.
ಮೂಲಗಳ ಪ್ರಕಾರ ಈ ದೆಹಲಿ ಪ್ರವಾಸದಿಂದ ಸಿಎಂ ಹಾಗೂ ಅಧ್ಯಕ್ಷರು ಹಿಂತಿರುಗಿದ ಕೂಡಲೇ ನಿಗಮ-ಮಂಡಳಿಗಳ ಸುಮಾರು 600ರಷ್ಟು ನಿರ್ದೇಶಕರ ನೇಮಕ ಪಟ್ಟಿ ಹೊರಬೀಳಲಿದೆ. ಇದಲ್ಲದೆ, ಬಾಕಿ ಉಳಿದ ಸುಮಾರು 8ಕ್ಕಿಂತ ಹೆಚ್ಚು ನಿಗಮ-ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಹೆಸರು ಅಂತಿಮಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಸಚಿವ ಸಂಪುಟ ವಿಸ್ತರಣೆ/ ಪುನಾರಚನೆಯು ನಿಕಟ ಭವಿಷ್ಯದಲ್ಲಿ ನಡೆಯುವುದೇ ಅಥವಾ ಬಿಬಿಎಂಪಿ ಚುನಾವಣೆ ನಂತರ ನಡೆಯುವುದೇ ಎಂಬುದು ಈ ದೆಹಲಿ ಪ್ರವಾಸದ ವೇಳೆ ನಿರ್ಧಾರವಾಗಲಿದೆ. ಏಕೆಂದರೆ, ಬಿಬಿಎಂಪಿ ಚುನಾವಣೆ ಹಾಗೂ ಹೈಕಮಾಂಡ್ ನ ನಿಲುವು ಈ ಎರಡು ಅಂಶಗಳು ಸಚಿವ ಸಂಪುಟ ವಿಸ್ತರಣೆ-ಪುನಾರಚನೆ ಯಾವಾಗ ನಡೆಯಲಿದೆ ಎಂಬುದನ್ನು ನಿರ್ಧರಿಸುವ ಪ್ರಮುಖ ಅಂಶಗಳು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮೂಲಗಳ ಪ್ರಕಾರ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಅವಕಾಶ ದೊರಕಿದರೆ ಮತ್ತು ಹೈಕಮಾಂಡ್ ಒಪ್ಪಿಗೆ ಸೂಚಿಸಿದರೆ ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆ-ಪುನಾರಚನೆ ನಡೆಸುವ ಉದ್ದೇಶ ಸಿದ್ದರಾಮಯ್ಯ ಅವರಿಗೆ ಇದೆ. ಒಂದು ವೇಳೆ ಈ ಅವಕಾಶ ದೊರಕಿದರೆ ಜೂ.15ರೊಳಗೆ (ಜೂ.15ರಿಂದ ಅಧಿಕ ಆಷಾಢ ಆರಂಭವಾಗಲಿರುವ ಹಿನ್ನೆಲೆಯಲ್ಲಿ) ಸಚಿವ ಸಂಪುಟ ವಿಸ್ತರಣೆ-ಪುನಾರಚನೆ ನಡೆಯಬಹುದು.
ಹೀಗಾಗಿ ದೆಹಲಿ ಪ್ರವಾಸದ ವೇಳೆ ಚುನಾವಣೆಯನ್ನು ಕೆಲ ತಿಂಗಳುಗಳ ಮಟ್ಟಿಗೆ ಮುಂದೂಡಲು ಇರುವ ಅವಕಾಶಗಳ ಬಗ್ಗೆ ಸುಪ್ರೀಂ ಕೋರ್ಟ್ನ ಕಾನೂನು ತಜ್ಞರೊಂದಿಗೆ ಚರ್ಚಿಸಲಿದ್ದಾರೆ. ಒಂದು ವೇಳೆ ಮೂರು ತಿಂಗಳು ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಅವಕಾಶ ದೊರಕಿದರೆ ಸಾಧ್ಯವಾದಷ್ಟು ಶೀಘ್ರವಾಗಿ ಸಚಿವ ಸಂಪುಟ ಪುನಾರಚನೆಗೆ ಅವರು ಕೈ ಹಾಕುವ ಸಾಧ್ಯತೆಯಿದೆ.
ಇದಾಗದ ಪಕ್ಷದಲ್ಲಿ ಬಿಬಿಎಂಪಿ ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ-ಪುನಾರಚನೆ ಮಾಡಲು ಅವಕಾಶ ನೀಡುವಂತೆ ಅವರು ಹೈಕಮಾಂಡ್ ನ ಮನವೊಲಿಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ, ಸಚಿವ ಸ್ಥಾನ ಆಕಾಂಕ್ಷಿಗಳಿಂದ ತೀವ್ರ ಒತ್ತಡಕ್ಕೆ ಒಳಗಾಗಿರುವ ಹೈಕಮಾಂಡ್ ಒಂದು ವೇಳೆ ನಿರ್ದೇಶನ ನೀಡಿದರೆ ಸಚಿವ ಸಂಪುಟ ವಿಸ್ತರಣೆ (ಖಾಲಿ ಇರುವ ನಾಲ್ಕು ಸ್ಥಾನಗಳನ್ನು ತುಂಬುವುದು) ನಡೆಸಿ, ಬಿಬಿಎಂಪಿ ಚುನಾವಣೆ ನಂತರ ಪುನಾರಚನೆ ಮಾಡಲು ಅವಕಾಶ ನೀಡುವಂತೆ ಹೈಕಮಾಂಡನ್ನು ಸಿಎಂ ಕೋರುವ ಸಾಧ್ಯತೆಯೂ ಇವೆ ಎನ್ನುತ್ತವೆ ಮೂಲಗಳು.