ನವದೆಹಲಿ : ದೇಶದ ಮೋಸ್ಟ್ ವಾಂಟೆಡ್ ಉಗ್ರರಾದ ದಾವೂದ್ ಇಬ್ರಾಹಿಂ, ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್, ಲಷ್ಕರ್ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಭಾರತ ಮತ್ತೂಮ್ಮೆ ಒತ್ತಡ ಹೇರಲು ಮುಂದಾಗಿದೆ. ಈ ಸಂಬಂಧ ಶೀಘ್ರದಲ್ಲೇ ಮತ್ತಷ್ಟು ಸಾಕ್ಷ್ಯಗಳನ್ನು ಆ ದೇಶಕ್ಕೆ ಹಸ್ತಾಂತರಿಸಲಿದೆ ಎಂದು ಹೇಳಲಾಗಿದೆ.
ಈ ಮೂವರೂ ಉಗ್ರರು ಪಾಕಿಸ್ತಾನದಲ್ಲಿ ಹೊಂದಿರುವ ಆಸ್ತಿ, ವಾಸಿಸುತ್ತಿರುವ ವಿಳಾಸ ಹಾಗೂ ಚಲನ-ವಲನಗಳ ಕುರಿತ ಮಾಹಿತಿಯನ್ನು ಭಾರತ ಹಸ್ತಾಂತರಿಸಲಿರುವ ಸಾಕ್ಷ್ಯವು ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ.
1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಸೂತ್ರಧಾರನಾದ ದಾವೂದ್, 2008ರ ಮುಂಬೈ ಮೇಲಿನ ದಾಳಿ ಪ್ರಕರಣದ ರೂವಾರಿಗಳಾಗಿರುವ ಹಫೀಜ್, ಲಖ್ವಿ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ವಾಸಿಸುತ್ತಿದ್ದು, ಅದೆಲ್ಲದರ ಪಟ್ಟಿಯನ್ನು ಸಾಕ್ಷ್ಯ ಹೊಂದಿರಲಿದೆ. ಇದನ್ನು ಕೇಂದ್ರ ಗೃಹ ಸಚಿವಾಲಯವು ವಿದೇಶಾಂಗ ಸಚಿವಾಲಯಕ್ಕೆ ಹಸ್ತಾಂತರಿಸಲಿದೆ. ವಿದೇಶಾಂಗ ಸಚಿವಾಲಯ ಪಾಕಿಸ್ತಾನದ ಜತೆ ಈ ವಿಚಾರ ಪ್ರಸ್ತಾಪಿಸಲಿದೆ ಎಂದು ಹೇಲಲಾಗಿದೆ.
ದಾವೂದ್ ಇಬ್ರಾಹಿಂ ಕುರಿತು ಕಳೆದ ತಿಂಗಳಷ್ಟೇ ಪಾಕಿಸ್ತಾನದಿಂದ ಮಾಹಿತಿ ಕೇಳಿದ್ದ ಭಾರತ, ಆತ ಪಾಕ್ ನಲ್ಲಿ ಹೊಂದಿರುವ ಎಲ್ಲ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನೆರೆದೇಶಕ್ಕೆ ಶಿಫಾರಸು ಮಾಡಿತ್ತು. ಅಲ್ಲದೆ ದಾವೂದ್ ಪಾಕಿಸ್ತಾನದಲ್ಲಿ ಹೊಂದಿರುವ ಕನಿಷ್ಠ 10 ಬ್ಯಾಂಕ್ ಖಾತೆಗಳ ಕುರಿತು ಮಾಹಿತಿಯನ್ನು ಕಲೆ ಹಾಕಿತ್ತು ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಹವಾಲಾ ಜಾಲದಲ್ಲಿ ದಾವೂದ್ ನಡೆಸುತ್ತಿದ್ದ ವಹಿವಾಟು ಪತ್ತೆ ಹಚ್ಚುವ ಮೂಲಕ ಆತ ಹೊಂದಿರುವ ಬ್ಯಾಂಕ್ ಖಾತೆಗಳನ್ನು ಗುಪ್ತಚರ ದಳಗಳು ಪತ್ತೆ ಮಾಡಿದ್ದವು ಎನ್ನಲಾಗಿದೆ.