ಬೀಜಿಂಗ್ : ಭಾರತ ಮತ್ತು ಚೀನಾ ಗಡಿಯಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಲು ಗಡಿಯಲ್ಲಿ ಉಭಯ ದೇಶಗಳು ನೀತಿ ಸಂಹಿತೆಯ ಒಪ್ಪಂದ ಮಾಡಿಕೊಳ್ಳಬೇಕು ಎಂದು ಚೀನಾ ಹೊಸ ಕ್ಯಾತೆ ತೆಗೆದಿದೆ.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಲ್ಎಸಿ(ನೈಜ ಗಡಿ ನಿಯಂತ್ರಣ ರೇಖೆ) ಬಗ್ಗೆ ಸ್ಪಷ್ಟತೆ ಬೇಕೆಂದು ಪ್ರತಿಪಾದಿಸಿದ್ದರು. ಈ ವಿಷಯದ ಕುರಿತಂತೆ ಚೀನಾ ಮೊದಲ ಬಹಿರಂಗ ಪ್ರತಿಕ್ರಿಯೆ ನೀಡಿದೆ. ಎಲ್ ಎಸಿ ಕುರಿತಂತೆ ಮೋದಿಯ ಪ್ರಸ್ತಾವನೆಗೆ ಏಷ್ಯಾ ವ್ಯವಹಾರಗಳ ವಿದೇಶಾಂಗ ಸಚಿವಾಲಯದ ಡೆಪ್ಯುಟಿ ಡೈರೆಕ್ಟರ್ ಜನರಲ್ ಹು ಆಂಗ್ ಕ್ಸಿಲಿಯಾನ್, ಭಾರತ ಮತ್ತು ಚೀನಾ ಗಡಿಯಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಲು ಗಡಿಯಲ್ಲಿ ಉಭಯ ದೇಶಗಳು ನೀತಿ ಸಂಹಿತೆಯ ಕರಾರು ಮಾಡಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.
ಗಡಿ ವಿಚಾರದಲ್ಲಿ ನಾವು ಏನೇ ಮಾಡಿದರು ಅದು ಕಾರ್ಯಾತ್ಮಕವಾಗಿರಬೇಕು. ಅಂದರೆ ನಮ್ಮ ಮಾತುಕತೆಯ ಪ್ರಕ್ರಿಯೆ ನಿಂತುಹೋಗದೆ, ಅದು ಶಂಕೆ ಮೂಡಿಸುವ ಅಡ್ಡಿಯಾಗಬಾರದು ಎಂದು ಹು ಆಂಗ್ ತಿಳಿಸಿದ್ದಾರೆ.
ಈ ವಿಚಾರದಲ್ಲಿ ಮುಂದೆ ಅದು ಅಡಚಣೆ ಉಂಟುಮಾಡಿ ಪರಿಸ್ಥಿತಿ ಬಿಕ್ಕಟ್ಟಿನ ಸ್ಥಿತಿಗೆ ತಲುಪಬಾರದು. ನಾವು ತುಂಬಾ ಜಾಗ್ರತೆಯಾಗಿರಬೇಕು. ಹಾಗಾಗಿ ನಾವು ಒಪ್ಪಂದ ಮಾಡಿಕೊಳ್ಳುವುದು ಉತ್ತಮ ಎಂದು ಮಾಧ್ಯಮದ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.