ನವದೆಹಲಿ : ಭಾರತದ ಯಾವುದೇ ನ್ಯಾಯಾಲಯದಲ್ಲಿ ಬೊಫೋರ್ಸ್ ಪ್ರಕರಣ ಈ ತನಕವೂ ಒಂದು ಹಗರಣವೆಂದು ಸಾಬೀತಾಗಿಲ್ಲ; ಬೊಫೋರ್ಸ್ ಹಗರಣವು ಕೇವಲ ಮಾಧ್ಯಮ ವಿಚಾರಣೆಯ ಫಲಶ್ರುತಿ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಸ್ವೀಡನ್ ಪತ್ರಿಕೆ ಡೇಜನ್ಸ್ ನ್ಹೆಟರ್ ಗೆ ನೀಡಿದ ಸಂದರ್ಶನದಲ್ಲಿ, ರಾಷ್ಟ್ರಪತಿ ಮುಖರ್ಜಿ ಅವರಿಗೆ 'ಬೊಫೋರ್ಸ್ ಪ್ರಕರಣವು ಒಂದು ಹಗರಣ ಎನಿಸಿಕೊಂಡದ್ದು ಮಾಧ್ಯಮ ವಿಚಾರಣೆಯ ಫಲಶ್ರುತಿಯೇ?' ಎಂದು ಕೇಳಲಾದ ಪ್ರಶ್ನೆಗೆ ಮುಖರ್ಜಿ ಅವರು ಹೀಗೆ ಉತ್ತರಿಸಿದ್ದಾರೆ.
ಬೊಫೋರ್ಸ್ ಒಂದು ಹಗರಣ ಎಂದು ಇನ್ನಷ್ಟೇ ಸಾಬೀತಾಗಬೇಕಾಗಿದೆ. ಭಾರತದ ಯಾವುದೇ ನ್ಯಾಯಾಲಯದಲ್ಲಿ ಈ ತನಕವೂ ಬೊಫೋರ್ಸ್ ಪ್ರಕರಣ ಒಂದು ಹಗರಣ ಎಂದು ಸಾಬೀತಾಗಿಲ್ಲ. ಬೊಫೋರ್ಸ್ ಗಿಂತ ಎಷ್ಟೋ ಮೊದಲು ನಾನು ದೇಶದ ರಕ್ಷಣಾ ಮಂತ್ರಿಯಾಗಿದ್ದೆ. ನಮ್ಮ ರಕ್ಷಣಾ ಪಡೆಯ ಎಲ್ಲ ಜನರಲ್ಗಳು, ದೇಶವು ಹೊಂದಲಿರುವ ಅತ್ಯುತ್ತಮ ತೋಪು ಎಂದು ಬೊಫೋರ್ಸ್ ಅನ್ನು ಸರ್ಟಿಫೈ ಮಾಡಿದ್ದರು. ಈ ದಿನದ ವರೆಗೂ ಭಾರತೀಯ ಸೇನೆ ಬೊಫೋರ್ಸ್ ಗನ್ ಉಪಯೋಗಿಸುತ್ತಿದೆ. ನೀವು ಮಾತನಾಡುತ್ತಿರುವ ತಥಾಕಥಿತ ಹಗರಣವು ಮಾಧ್ಯಮ ವಿಚಾರಣೆಯ ಫಲಶ್ರುತಿಯೇ ಹೌದೆಂದು ನಾನು ಹೇಳುತ್ತೇನೆ. ಆ ಸಂದರ್ಭದಲ್ಲಿ ಬೊಪೋರ್ಸ್ ಕುರಿತಂತೆ ಮಾಧ್ಯಮ ವಿಚಾರಣೆ ನಡೆದಿತ್ತು. ಅದೇನಿದ್ದರೂ ನಾವು ಅಂದಿನ ಸಂದರ್ಭದಲ್ಲಿ ಬೊಫೋರ್ಸ್ಗೆ ನೀಡಲಾಗಿದ್ದ ವಿಪರೀತ ಮಾಧ್ಯಮ ಪ್ರಚಾರದಿಂದ ಪ್ರಭಾವಿತರಾಗಬೇಕಾಗಿಯೂ ಇಲ್ಲ; ಆಗಬಾರದು ಕೂಡ' ಎಂದು ಹೇಳಿದ್ದಾರೆ
ಹಾಗಿದ್ದರೆ ಬೊಫೋರ್ಸ್ ಹಗರಣವು ಕೇವಲ ಮಾಧ್ಯಮ ಸೃಷ್ಟಿಯೇ ಎಂಬ ಪ್ರಶ್ನೆಗೆ ಪತ್ರಿಕ್ರಿಯೆ ನೀಡಲು ಪ್ರಣಬ್ ನಿರಾಕರಿಸಿದ್ದಾರೆ. 'ನನಗದು ಗೊತ್ತಿಲ್ಲ. ನಾನದನ್ನು ವಿವರಿಸಿ ಹೇಳಲಾರೆ. ನೀವು ಬೊಫೋರ್ಸ್ ಪ್ರಕರಣ ಎನ್ನುವ ಬದಲು 'ಹಗರಣ' ಎಂಬ ಶಬ್ದವನ್ನು ಬಳಸುತ್ತಿದ್ದೀರಿ. ನಾನು ಹೇಳುವುದೇನೆಂದರೆ ಬೊಫೋರ್ಸ್ ಪ್ರಕರಣವು ಮಾಧ್ಯಮ ವಿಚಾರಣೆಯ ಫಲವಾಗಿ ಹಗರಣವೆಂದು ಹಣೆಪಟ್ಟಿ ಹಚ್ಚಿಕೊಂಡಿತು. ಈ ತನಕವೂ ಯಾವುದೇ ಭಾರತೀಯ ನ್ಯಾಯಾಲಯದಲ್ಲಿ ಬೊಫೋರ್ಸ್ ಪ್ರಕರಣವು ಹಗರಣವೆಂದು ಸಾಬೀತಾಗಿಲ್ಲ. ಮತ್ತು ಈ ಒಂದು ಆರೋಪಿತ ಹಗರಣದ ಬಗ್ಗೆ ಯಾವುದೇ ಭಾರತೀಯ ನ್ಯಾಯಾಲಯ ಈ ತನಕ ನಿರ್ಣಾಯಕ ತೀರ್ಪು ನೀಡಿದ್ದಿಲ್ಲ' ಎಂದು ಪ್ರಣಬ್ ಹೇಳಿದರು.
ಭಾರತ ಸರಕಾರವು 1986ರಲ್ಲಿ ಸ್ವೀಡನ್ ನ ಶಸ್ತ್ರಾಸ್ತ್ರ ಪೂರೈಕೆಯ ಬೊಫೋರ್ಸ್ ಕಂಪೆನಿಯೊಂದಿಗೆ 285 ಮಿಲಿಯ ಡಾಲರ್ ಗಳ ವ್ಯವಹಾರವನ್ನು 155 ಎಂಎಂ ಹೊವಿಟ್ಸರ್ ಫೀಲ್ಡ್ ಗನ್ಗಳ ಪೂರೈಕೆ ವ್ಯವಹಾರದೊಂದಿಗೆ ಜೋಡಿಸಿತ್ತು.
ಈ ವ್ಯವಹಾರದ ಅನುಮೋದನೆಗಾಗಿ ಭಾರತೀಯ ರಾಜಕಾರಣಿಗಳು ಮತ್ತು ರಕ್ಷಣಾ ಸಿಬಂದಿಗಳು ಲಂಚ ಪಡೆದಿದ್ದರೆಂದು ಸ್ವೀಡನ್ ಮಾಧ್ಯಮವು ಅನಂತರ ಆರೋಪಿಸಿತ್ತು.