ಬೆಂಗಳೂರು : ಒಂದಂಕಿ ಲಾಟರಿ ಹಗರಣದ ಕಿಂಗ್ ಪಿನ್ ಪಾರಿ ರಾಜನ್ ಬಂಧನಕ್ಕೆ ಅಡ್ಡಿಯಾಗಿದ್ದಾರೆಂಬ ಆರೋಪದಡಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಕರ್ನಾಟಕ ಸರ್ಕಾರ ಶನಿವಾರ ಅಮಾನತುಗೊಳಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಲಾಟರಿ ದಂಧೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ, ಪ್ರಕರಣದಲ್ಲಿ ಐಜಿಪಿ ಅಲೋಕ್ ಕುಮಾರ್ (ಶಂಕರ್ ಬಿದರಿಯೇ ರಾಜನ್ ನನ್ನು ಅಲೋಕ್ ಗೆ ಪರಿಚಯಿಸಿದ್ದರು), ಲಾಟರಿ ಕಿಂಗ್ ಪಿನ್ ಪಾರಿ ರಾಜನ್ ಜೊತೆ ಸ್ನೇಹ ಹೊಂದಿದ್ದು, ಅವರನ್ನು ರಕ್ಷಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದರು. ಸರ್ಕಾರ ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದರು.
ಪಾರಿ ರಾಜನ್ ರಾಜ್ಯಾದ್ಯಂತ ಅಕ್ರಮವಾಗಿ ಲಾಟರಿ ದಂಧೆ ನಡೆಸುತ್ತಿದ್ದ. ಈತನ ಜೊತೆ ಸ್ನೇಹ ಹೊಂದಿರುವ ಅಲೋಕ್ ಆತನ ದಂಧೆಗೆ ಬೆಂಬಲ ನೀಡುತ್ತಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.
ಲಾಟರಿ ಕಿಂಗ್ ಪಿನ್ ಪಾರಿ ರಾಜನ್ ನನ್ನು ಬಂಗಾರಪೇಟೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಂಧಿಸಲು ಮುಂದಾದ ಸಂದರ್ಭದಲ್ಲಿ ಅಲೋಕ್ ಕುಮಾರ್ ತಡೆಯಲು ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಬ್ ಇನ್ಸ್ ಪೆಕ್ಟರ್ ಜೊತೆ ಮೊಬೈಲ್ ನಲ್ಲಿ ಸಂಪರ್ಕಿಸಿದ್ದ ಅಲೋಕ್ ಕುಮಾರ್, ರಾಜನನ್ನು ಬಂಧಿಸದಂತೆ ತಾಕೀತು ಮಾಡಿದ್ದಾರೆಂದು ವರದಿ ಹೇಳಿದೆ.
ಏತನ್ಮಧ್ಯೆ ತಾನು ಸಬ್ ಇನ್ಸ್ ಪೆಕ್ಟರ್ ಜೊತೆ ಮಾತನಾಡಿರುವುದಾಗಿ ಅಲೋಕ್ ಒಪ್ಪಿಕೊಂಡಿದ್ದಾರೆ. ಆದರೆ ನಾನು ಕಾನೂನುನನ್ನು ಪಾಲಿಸಿ ಎಂದಷ್ಟೇ ಹೇಳಿರುವುದಾಗಿ ತಿಳಿಸಿದ್ದರು. ಆದರೆ ಸಿಐಡಿ ನಡೆಸಿದ ತನಿಖಾ ವರದಿಯಲ್ಲಿ ಅಲೋಕ್ ಮತ್ತು ಪಾರಿ ರಾಜನ್ ನಡುವೆ ಮಾತನಾಡಿರುವ ಕರೆಗಳ ಸಂಖ್ಯೆ 151 ಎಂದು ಬಯಲು ಮಾಡಿದೆ.