ಚೆನ್ನೈ : ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಣ್ಣಾಡಿಎಂಕೆ ಪ್ರಧಾನ ಕಾರ್ಯದರ್ಶಿ ಜಯಲಲಿತಾ ಅವರು ನಿರೀಕ್ಷೆಯಂತೆ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶನಿವಾರ ಬೆಳಗ್ಗೆ 11-20ಕ್ಕೆ ಮದ್ರಾಸ್ ವಿವಿ ಶತಮಾನೋತ್ಸವ ಭವನದಲ್ಲಿ ನಡೆದ ಸಮಾರಂಭದಲ್ಲಿ 5ನೇ ಬಾರಿಗೆ ಮಖ್ಯಮಂತ್ರಿಯಾಗಿ ಜಯಲಲಿತಾ ಪ್ರಮಾಣ ವಚನ ಸ್ವೀಕರಿಸಿದರು.
ತಮಿಳುನಾಡಿನ ರಾಜ್ಯಪಾಲ ಕೆ.ರೋಸಯ್ಯ ಜಯಲಲಿತಾ ಅವರಿಗೆ ಪ್ರತಿಜ್ನಾವಿಧಿ ಬೋಧಿಸಿದರು. ದೇವರ ಹೆಸರಲ್ಲಿ ಜಯಾ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಯಾ ಜೊತೆ 28 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಜಯಲಲಿತಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಲಿವುಡ್ ನ ಖ್ಯಾತ ನಟರಾದ ರಜನಿಕಾಂತ್, ಶರತ್ ಕುಮಾರ್, ವಿವೇಕ್, ಶಿವಕಾರ್ತಿಕೇಯನ್, ಶಿವಾಜಿ ಪ್ರಭು, ಸಂಗೀತ ನಿರ್ದೇಶಕ ಇಳಯರಾಜ, ಜಯಾ ಆಪ್ತರಾದ ಶಸಿಕಲಾ, ಸಾಕು ಮಗ ಸುಧಾಕರನ್ ಹಾಗೂ ಕೇಂದ್ರ ಕೈಗಾರಿಕಾ ಖಾತೆ ಸಚಿವ ರಾಧಾಕೃಷ್ಣನ್, ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಸೇರಿದಂತೆ ಹಲವು ಗಣ್ಯಾತೀಗಣ್ಯರು ಭಾಗವಹಿಸಿದ್ದರು.
ಇತ್ತೀಚೆಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ನಿಂದ ಖುಲಾಸೆಯಾದ ಹಿನ್ನೆಲೆಯಲ್ಲಿ ಜಯಲಲಿತಾ ಅವರನ್ನು ಅಣ್ಣಾಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಶುಕ್ರವಾರ ಪಕ್ಷದ ಶಾಸಕಾಂಗ ಸಭೆಯು ಆಯ್ಕೆ ಮಾಡಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಅವರು ರಾಜ್ಯಪಾಲ ಕೆ. ರೋಸಯ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದರು.