ಪಾಟ್ನಾ : ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಸ್ತಾಪಿತ ಜನತಾ ಪರಿವಾರದ ಜೊತೆ ಕೈಜೋಡಿಸುವಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿಗೆ ರಾಷ್ಟ್ರೀಯ ಜನತಾ ದಳದ ವರಿಷ್ಠ ಲಾಲೂ ಪ್ರಸಾದ್ ಯಾದವ್ ಆಹ್ವಾನ ನೀಡಿದ್ದಾರೆ.
ಬಿಹಾರದ ಮುಖ್ಯಮಂತ್ರಿ ಗಾದಿಯನ್ನು ತನ್ನ ಆಪ್ತ ನಿತೀಶ್ ಕುಮಾರ್ ಗೆ ಬಿಟ್ಟುಕೊಡುವುದಿಲ್ಲ ಎಂದು ಬಂಡಾಯ ಎದ್ದಿದ್ದ ಮಾಂಝಿಯನ್ನು ಜನತಾ ದಳ (ಸಂಯುಕ್ತ)ದಿಂದ ಉಚ್ಚಾಟಿಸಲಾಗಿತ್ತು. ಆ ಬಳಿಕ ಮಾಂಝಿ ಸ್ವಂತ ಪಕ್ಷ ಹಿಂದೂಸ್ತಾನಿ ಏವಂ ಮೋರ್ಚಾವನ್ನು ಹುಟ್ಟುಹಾಕಿದ್ದಾರೆ.
ಲಾಲೂ ಮಾಂಝಿಗೆ ಆಹ್ವಾನ ನೀಡಲು ಪ್ರಮುಖ ಕಾರಣ, ಬಿಹಾರದ ಬದ್ವಾಗಾಂವ್ ನಲ್ಲಿ ಎನ್.ಡಿ.ಎ ನೇತೃತ್ವದ ಬಿಜೆಪಿ ಜೊತೆ ಮಾಂಝಿ ಸೇರ್ಪಡೆಯಾಗುವುದನ್ನು ತಪ್ಪಿಸಲು ಈ ತಂತ್ರ ಹೂಡಲಾಗಿದೆ. ಆದರೆ ಲಾಲೂ ಅವರ ಈ ಆಹ್ವಾನಕ್ಕೆ ನಿತೀಶ್ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜನತಾ ಪರಿವಾರದ ಜೊತೆ ಸೇರಿ ಎಂಬ ಲಾಲೂ ಪ್ರಸಾದ್ ಯಾದವ್ ನೀಡಿದ್ದ ಆಹ್ವಾನಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಜಿತಿನ್ ಮಾಂಝಿ, ಮುಂದಿನ ಚುನಾವಣೆಯಲ್ಲಿ ಯಾವ ಮೈತ್ರಿಕೂಟದ ಜೊತೆಯೂ ಕೈಜೋಡಿಸುವ ಪ್ರಶ್ನೆಯೇ ಇಲ್ಲ. ಬಿಹಾರದ ಎಲ್ಲಾ 243 ಸ್ಥಾನಗಳಲ್ಲೂ ಏಕಾಂಗಿಯಾಗಿ ಪಕ್ಷ ಕಣಕ್ಕೆ ಇಳಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.