ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಚಾಲನೆ ನೀಡಿರುವ 3 ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, 7 ಕೋಟಿಗೂ ಅಧಿಕ ಜನರು ಕೇವಲ ಒಂದೇ ವಾರದಲ್ಲಿ ಈ ಯೋಜನೆಗಳಿಗೆ ನೋಂದಣೆ ಮಾಡಿಸಿಕೊಡಿದ್ದಾರೆ.
ಮೇ 9ರಂದು ಪ್ರಧಾನಿ ನರೇಂದ್ರ ಮೋದಿ ‘ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನಾ’, ‘ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನಾ’ ಮತ್ತು ‘ಅಟಲ್ ಪಿಂಚಣಿ ಯೋಜನಾ’ಗೆ ಚಾಲನೆ ನೀಡಿದ್ದರು.
ಮೇ 13 ಸಂಜೆಯವರೆಗಿನ ಅಂಕಿ ಅಂಶಗಳ ಪ್ರಕಾರ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನಾಗೆ 5.19 ಕೋಟಿ ಜನರು ನೋಂದಣೆ ಮಾಡಿಸಿದ್ದು, ವಿಮಾ ಪಾಲಿಸಿ ಮಾಡಿಸಿದ್ದಾರೆ. 18-70 ವರ್ಷ ವಯೋಮಾನದ ಉಳಿತಾಯ ಬ್ಯಾಂಕ್ ಖಾತೆ ಹೊಂದಿರುವವರು ಈ ವಿಮಾ ಯೋಜನೆಗೆ ನೋಂದಣೆ ಮಾಡಿಸಬಹುದು. 12 ರೂ. ಪ್ರತಿ ವರ್ಷ ಪ್ರೀಮಿಯಂ ಹಣ ಪಾವತಿ ಮಾಡಬೇಕಿದ್ದು, ಅಪಘಾತ ಸಂಭವಿಸಿದಾಗ 2 ಲಕ್ಷ ರೂ.ವರೆಗೆ ವಿಮಾ ಹಣ ದೊರೆಯಲಿದೆ. ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನಾಗೆ 1.59 ಕೋಟಿ ಜನರು ಮತ್ತು ಅಟಲ್ ಪಿಂಚಣಿ ಯೋಜನಾಗೆ 70 ಸಾವಿರ ಜನರು ನೋಂದಣೆ ಮಾಡಿಸಿದ್ದು, ಒಟ್ಟು 3 ಯೋಜನೆಗಳಿಂದ 6.7 ಕೋಟಿ ಜನರು ನೋಂದಣೆ ಮಾಡಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.