ಬೆಂಗಳೂರು : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯ ನೀಡಿದ್ದ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 100 ಕೋಟಿ ರೂ. ದಂಡ ಪ್ರಶ್ನಿಸಿ ಜಯಲಲಿತಾ ಸಲ್ಲಿಸಿದ್ದ ಮೇಲ್ಮನವಿ ತೀರ್ಪು ಸೋಮವಾರ ಹೈಕೋರ್ಟ್ ನಲ್ಲಿ ಪ್ರಕಟವಾಗಲಿದೆ.
ನ್ಯಾ.ಸಿ.ಆರ್.ಕುಮಾರಸ್ವಾಮಿ ಅವರ ವಿಶೇಷ ಏಕ ಸದಸ್ಯ ಪೀಠ ಕೋರ್ಟ್ ಹಾಲ್ 14ರಲ್ಲಿ ಬೆಳಗ್ಗೆ 11ಗಂಟೆಗೆ ಮೇಲ್ಮನವಿಯ ತೀರ್ಪು ಪ್ರಕಟಿಸಲಿದ್ದು, ಇದು ಜಯಲಲಿತಾ ಅವರ ರಾಜಕೀಯ ಭವಿಷ್ಯ ನಿರ್ಣಯಿಸುವುದರಿಂದ ತೀರ್ಪು ಅತ್ಯಂತ ಮಹತ್ವ ಪಡೆದು ಕೊಂಡಿದೆ.
ಪ್ರಕರಣದ ಇತರೆ ಆರೋಪಿಗಳಾದ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್, ದತ್ತುಪುತ್ರ ಸುಧಾಕರನ್ ಮತ್ತು ಇಳವರಸಿ ಅವರ ಮೇಲ್ಮನವಿಯ ತೀರ್ಪು ಕೂಡ ಇದೇ ವೇಳೆ ಪ್ರಕಟವಾಗಲಿದೆ.
ಹೈಕೋರ್ಟ್ ಒಂದು ವೇಳೆ ಅಧೀನ ನ್ಯಾಯಾಲಯದ ತೀರ್ಪು ಎತ್ತಿಹಿಡಿದರೆ 21 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸಿದ್ದ ಜಯಲಲಿತಾ ಮತ್ತೆ ಜೈಲು ಸೇರಬೇಕಾಗುತ್ತದೆ. ಒಂದೊಮ್ಮೆ ಖುಲಾಸೆಯಾದರೆ ಜಯಲಲಿತಾ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಲಿದ್ದಾರೆ.
1992ರಿಂದ 1996ರವರೆಗೆ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಯಲಲಿತಾ 66.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದರು ಎಂದು ದೂರು ದಾಖಲಾಗಿತ್ತು. ಪ್ರಕರಣ ದಾಖಲಾಗಿ 18 ವರ್ಷಗಳ ನಂತರ ಬೆಂಗಳೂರಿನ ವಿಶೇಷ ನ್ಯಾಯಾಲಯ 2014ರ ಸೆ. 27ರಂದು ಜಯಲಲಿತಾ ಅವರನ್ನು ದೋಷಿ ಎಂದು ಪರಿಗಣಿಸಿ 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ. ದಂಡ ವಿಧಿಸಿತ್ತು. ತೀರ್ಪಿನ ವೇಳೆ ಹಾಜರಿದ್ದ ಜಯಲಲಿತಾ ಅವರನ್ನು ನೇರವಾಗಿ ಜೈಲಿಗೆ ಕಳುಹಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಜಯಲಲಿತಾ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಕೋರ್ಟ್ ಜಾಮೀನು ತಿರಸ್ಕರಿಸಿದ್ದರಿಂದ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. 2014ರ ಅ.17ರಂದು ಜಾಮೀನು ನೀಡಿದ್ದ ಸುಪ್ರೀಂಕೋರ್ಟ್, ಮೇಲ್ಮನವಿ ವಿಚಾರಣೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಿ ಅಂತಿಮ ತೀರ್ಪು ಪ್ರಕಟಿಸುವಂತೆ ಹೈಕೋರ್ಟ್ಗೆ ಆದೇಶಿಸಿತ್ತು.
ಅದರಂತೆ ಜಯಲಲಿತಾ ಮೇಲ್ಮನವಿ ವಿಚಾರಣೆಗೆ 2015ರ ಜ.2ರಂದು ನ್ಯಾ.ಸಿ.ಆರ್.ಕುಮಾರಸ್ವಾಮಿ ಅವರ ವಿಶೇಷ ಏಕ ಸದಸ್ಯ ಪೀಠ ರಚನೆ ಮಾಡಲಾಗಿತ್ತು. ಜ.5ರಿಂದ ವಿಶೇಷ ಪೀಠ ದಿನನಿತ್ಯದ ಆಧಾರದ ಮೇಲೆ ವಿಚಾರಣೆ ನಡೆಸಿತ್ತು. ಮಾರ್ಚ್ 11ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಈ ಮಧ್ಯೆ ಅ.17ರಿಂದ ಮೂರು ತಿಂಗಳ ಒಳಗೆ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಪ್ರಕಟಿಸಲಾಗದ ಕಾರಣ ಮೇ 12ರೊಳಗೆ ತೀರ್ಪು ಪ್ರಕಟಿಸಬೇಕು ಎಂದು ಕಾಲಾವಕಾಶ ವಿಸ್ತರಿಸಿ ಸುಪ್ರೀಂಕೋರ್ಟ್ ಹೈಕೋರ್ಟ್ಗೆ ನಿರ್ದೇಶಿಸಿತ್ತು. ಈ ನಿಟ್ಟಿನಲ್ಲಿ ಮೇ 11ರಂದು ತೀರ್ಪು ಹೊರಬೀಳಲಿದೆ.