ಕೋಲ್ಕತ್ತಾ : ದೇಶದ ಜನರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ದೇಶದ ಬಹುಪಾಲು ಜನರಿಗೆ ಪ್ರಯೋಜನವಾಗುವ ಎರಡು ವಿಮೆ ಹಾಗೂ ಒಂದು ಪಿಂಚಣಿ ಯೋಜನೆಗಳಿಗೆ ಚಾಲನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತಾದಲ್ಲಿ ಹಾಗೂ 60 ಕೇಂದ್ರ ಮಂತ್ರಿಗಳು ವಿವಿಧ ರಾಜ್ಯಗಳಲ್ಲಿ ಈ ಯೋಜನೆಗಳಿಗೆ ನಿಶಾನೆ ತೋರಿದರು. ಒಟ್ಟಾರೆ ದೇಶದ 115 ಕಡೆ ಒಮ್ಮೆಲೆ ಈ ಯೋಜನೆಗಳು ಉದ್ಘಾಟನೆಯಾದವು.
ಮಾಸಿಕ 1 ರೂ.ಗೆ 2 ಲಕ್ಷ ರೂ. ಅಪಘಾತ ವಿಮೆ ಒದಗಿಸುವ "ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ', ವಾರ್ಷಿಕ 330 ರೂ.ಗೆ 2 ಲಕ್ಷ ರೂ. ಜೀವವಿಮೆ ಒದಗಿಸುವ ’ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆ', ಅಸಂಘಟಿತ ವಲಯದ ಆರ್ಥಿಕ ದುರ್ಬಲ ವರ್ಗದವರಿಗೆ ಸರ್ಕಾರದ ಖಾತ್ರಿಯಡಿ ನಿಶ್ಚಿತ ಪಿಂಚಣಿ ಒದಗಿಸುವ"ಅಟಲ್ ಪಿಂಚಣಿ ಯೋಜನೆ'ಗಳನ್ನು ಕೋಲ್ಕತಾದಲ್ಲಿ ನಡೆದ ಸಮಾರಂಭದಲ್ಲಿ ಮೋದಿ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಪ್ರಧಾನಿ, ಬಡವರ ಅನುಕೂಲಕ್ಕಾಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಆದರೆ ಬ್ಯಾಂಕುಗಳಲ್ಲಿ ಈಗ ಬಡವರನ್ನು ಕಾಣಲು ಸಾಧ್ಯವೇ? ದೇಶದ ಶೇ.80ರಿಂದ ಶೇ.90 ಜನರಿಗೆ ಪಿಂಚಣಿ ಹಾಗೂ ವಿಮೆಯ ಸೌಲಭ್ಯವೇ ಇಲ್ಲ. ಅಭಿವೃದ್ಧಿ ಎಂಬ ಪ್ರಯಾಣದಲ್ಲಿ ಬಡವರಿಗೆ ಪಾಲು ಸಿಗದಿದ್ದರೆ ಅಂತಹ ಅಭಿವೃದ್ಧಿ ಅಪೂರ್ಣಗೊಳ್ಳುತ್ತದೆ ಎಂದು ವಾದಿಸಿದರು. ಜನತೆಗೆ 60 ವರ್ಷ ತುಂಬಿದಾಗ ಅವರಿಗೆ ಬೇರೊಬ್ಬರ "ಸಹಾರಾ' ಬೇಕಾಗಿಲ್ಲ. ಶಕ್ತಿ ಬೇಕು ಎಂದು ಸಹಾರಾ ಹೂಡಿಕೆ ಹಗರಣದ ಹೆಸರೆತ್ತದೆ ಮೋದಿ ಕುಟುಕಿದರು.
* ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ:
ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಎಲ್ಲ ಗ್ರಾಹಕರಿಗೂ ಈ ಯೋಜನೆಯಡಿ ಅಪಘಾತ ವಿಮಾ ಸೌಲಭ್ಯ ಲಭಿಸಲಿದೆ. ಇದಕ್ಕಾಗಿ ಗ್ರಾಹಕರ ಖಾತೆಯಿಂದ ನೇರವಾಗಿ ಮಾಸಿಕ 1 ರೂ. ವಿಮಾ ಕಂತನ್ನು ಕಡಿತ ಮಾಡಿಕೊಳ್ಳಲಾಗುತ್ತದೆ. ಅಪಘಾತದಿಂದ ಸಾವು ಅಥವಾ ಅಂಗವೈಕಲ್ಯಕ್ಕೆ ತುತ್ತಾದರೆ 2 ಲಕ್ಷ ರೂ. ವಿಮೆ ಸಿಗಲಿದೆ. 18ರಿಂದ 70 ವರ್ಷದವರಿಗೆ ಈ ಸೌಲಭ್ಯ ಲಭಿಸಲಿದ್ದು, ವಾರ್ಷಿಕ 12 ರೂ. ಕಂತು ಪಾವತಿಸಬೇಕಾಗುತ್ತದೆ.
* ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ:
ಪ್ರತಿವರ್ಷ 330 ರೂ. ಪಾವತಿಸಿದರೆ 2 ಲಕ್ಷ ರೂ. ಜೀವವಿಮೆ ಸಿಗುತ್ತದೆ. ಅಪಘಾತದಿಂದ ಮಾತ್ರವಲ್ಲದೆ ಬೇರೆ ಯಾವುದೇ ರೀತಿಯಲ್ಲೂ ಸಾವು ಸಂಭವಿಸಿದರೂ ಕುಟುಂಬ ಸದಸ್ಯರಿಗೆ ವಿಮೆ ಹಣ ನೀಡಲಾಗುತ್ತದೆ. 18ರಿಂದ 50 ವರ್ಷದೊಳಗಿನ ವ್ಯಕ್ತಿಗಳು ಈ ವಿಮೆ ಪಡೆಯಲು ಅರ್ಹಲು. ಬ್ಯಾಂಕ್ ಖಾತೆಯಿಂದ ಪ್ರತಿವರ್ಷ ಹಣ ಪಾವತಿಸಬೇಕು. ವಿಮೆಯ ಅವಧಿ ಜೂನ್ 1ರಿಂದ ಮೇ 31ರವರೆಗೆ ಇರುತ್ತದೆ.
* ಅಟಲ್ ಪಿಂಚಣಿ ಯೋಜನೆ:
1000, 2000, 3000, 4000 ಅಥವಾ 5000 ರೂ. ಕನಿಷ್ಠ ನಿಶ್ಚಿತ ಪಿಂಚಣಿ ನೀಡುವ ಯೋಜನೆ ಇದು. 60ನೇ ವಯಸ್ಸಿನಿಂದ ಪಿಂಚಣಿ ಆರಂಭವಾಗಲಿದೆ. 18ರಿಂದ 40 ವರ್ಷದೊಳಗಿನವರು ನೋಂದಾಯಿಸಿಕೊಳ್ಳಬಹುದು. ಹೆಚ್ಚು ಹಣ ನೀಡಿದರೆ ಹೆಚ್ಚು ಪಿಂಚಣಿ ಸಿಗಲಿದೆ. 20 ಹಾಗೂ ಅದಕ್ಕಿಂತ ಹೆಚ್ಚು ವರ್ಷ ಈ ಯೋಜನೆಯಲ್ಲಿ ಹಣ ತೊಡಗಿಸಬೇಕು. ಪಿಂಚಣಿಗೆ ಸರ್ಕಾರವೇ ಖಾತ್ರಿ ಕೊಡಲಿದೆ.