ಕಠ್ಮಂಡು : ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕಂಪದಲ್ಲಿ ನಾಶಗೊಂಡಿರುವ ಖಾಸಗಿ ಮತ್ತು ಸಾರ್ವಜನಿಕ ಆಸ್ತಿ, ಪಾಸ್ತಿಗಳನ್ನು ಎರಡು ವರ್ಷದೊಳಗೆ ಪುನರ್ ನಿರ್ಮಾಣ ಮಾಡಲಾಗುವುದು ಎಂದು ನೇಪಾಳ ಪ್ರಧಾನಮಂತ್ರಿ ಸುಶೀಲ್ ಕೊಯಿರಾಲಾ ತಿಳಿಸಿದ್ದಾರೆ.
ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ನೆರವಿನ ಕಾರ್ಯಕ್ಕೆ ನಾಗರಿಕರು, ನೆರೆ ದೇಶಗಳು ಹಾಗೂ ವಲನೆ ಕಾರ್ಮಿಕರು ಉದಾರ ನೆರವು ನೀಡಬೇಕೆಂದು ಕರೆ ನೀಡಿದ್ದಾರೆ.
ಎರಡು ವಾರಗಳ ಹಿಂದೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಬಹುತೇಕ ಕಟ್ಟಡಗಳು ನಾಶವಾಗಿದೆ. ಶಾಲೆ, ಕಾಲೇಜುಗಳು, ಆರೋಗ್ಯ ಕೇಂದ್ರಗಳು, ನೀರು ಸರಬರಾಜು ಕೇಂದ್ರ, ವಿದ್ಯುತ್ ಹಾಗೂ ಸರ್ಕಾರಿ ಕಚೇರಿಗಳನ್ನು ಎರಡು ವರ್ಷಗಳಲ್ಲಿ ಪುನರ್ ಸ್ಥಾಪಿಸಬೇಕೆಂದು ಹೇಳಿದರು.
ಧಾರ್ಮಿಕ, ಪುರಾತತ್ವ ಹಾಗೂ ಸಾಂಸ್ಕೃತಿಕ ಸ್ಥಳಗಳನ್ನು ಐದು ವರ್ಷಗಳಲ್ಲಿ ಪುನರ್ ನಿರ್ಮಾಣ ಮಾಡಲಾಗುವುದು ಎಂದು ಕೊಯಿರಾಲ ತಿಳಿಸಿದರು. ಈ ಪುನರ್ ನಿರ್ಮಾಣ ಕಾರ್ಯಕ್ಕೆ ಎಲ್ಲಾ ನೇಪಾಳಿಗರು, ನೆರೆ ದೇಶಗಳು, ವಲಸೆ ಕೆಲಸಗಾರರು ಹಾಗೂ ರಾಜಕೀಯ ಪಕ್ಷಗಳು ಸರ್ಕಾರಕ್ಕೆ ಸಾಥ್ ನೀಡಬೇಕೆಂದು ಮನವಿ ಮಾಡಿಕೊಂಡರು.
ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 7, 912ಕ್ಕೆ ಏರಿದ್ದು. ಗಾಯಗೊಂಡವರ ಸಂಖ್ಯೆ 16,037 ಎಂದು ನೇಪಾಳ ಪೊಲೀಸರು ಅಂಕಿಅಂಶ ನೀಡಿದ್ದಾರೆ. ಸುಮಾರು 2,90,000 ಕಟ್ಟಡ ಸಂಪೂರ್ಣ ನಾಶಗೊಂಡಿದ್ದು, 2,50,000 ಕಟ್ಟಡ ಭಾಗಶಃ ಹಾನಿಗೊಂಡಿದೆ.