ನವದೆಹಲಿ : ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 2,200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 6,000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನೇಪಾಳಕ್ಕೆ ಸನಿಹದಲ್ಲಿರುವ ಬಿಹಾರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಮತ್ತು ದಕ್ಷಿಣ ಭಾರತದಲ್ಲೂ ಭೂಮಿ ನಡುಗಿದ್ದು, ಈ ರಾಜ್ಯಗಳಲ್ಲಿ ಒಟ್ಟು 50ಕ್ಕೂ ಹೆಚ್ಚು ಮಂದಿ ಮಂದಿ ಬಲಿಯಾಗಿದ್ದಾರೆ. ಚೀನಾ, ಭೂತಾನ್, ಪಾಕಿಸ್ತಾನ, ಬಾಂಗ್ಲಾದೇಶದಲ್ಲೂ ಭೂಕಂಪ ಸಂಭವಿಸಿದ್ದು, 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ನೇಪಾಳದಲ್ಲಿ ಈ ಪರಿ ತೀವ್ರತೆಯ ಭೂಕಂಪ ಸಂಭವಿಸುತ್ತಿರುವುದು 81 ವರ್ಷಗಳಲ್ಲಿ ಇದೇ ಮೊದಲು. ಇದರಿಂದ ನೇಪಾಳ ಜನರು ಚೇತರಿಸಿಕೊಳ್ಳುವ ಮೊದಲೇ 4.5ಕ್ಕಿಂತ ಹೆಚ್ಚು ತೀವ್ರತೆಯ 16 ಪಶ್ಚಾತ್ ಕಂಪನಗಳು ಉಂಟಾಗಿದ್ದು, ಜನರು ಆತಂಕಗೊಂಡಿದ್ದಾರೆ. 1000ಕ್ಕೂ ಹೆಚ್ಚು ಮನೆಗಳು ಮತ್ತು ಕಟ್ಟಡಗಳು ನೆಲಕ್ಕೆ ಉರುಳಿದ್ದು, ಸೂಕ್ತ ಸಂಖ್ಯೆಯ ರಕ್ಷಣಾ ಕಾರ್ಯಕರ್ತರು ಇಲ್ಲದ ಕಾರಣ ರಕ್ಷಣಾ ಕಾರ್ಯಕ್ಕೆ ಭಾರೀ ಅಡ್ಡಿ ಎದುರಾಗಿದೆ.
ಈ ನಡುವೆ ಭೂಕಂಪದ ಬೆನ್ನಲ್ಲೇ ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯಲ್ಲಿ ಭಾರಿ ಪ್ರಮಾಣದಲ್ಲಿ ಹಿಮಗಡ್ಡೆಗಳ ಕುಸಿತ ಉಂಟಾಗಿ 18 ಮಂದಿ ಪರ್ವಾತಾರೋಹಿಗಳು ಮೃತಪಟ್ಟಿದ್ದಾರೆ.
ವಿಪತ್ತು ನಿರ್ವಹಣಾ ಕಾರ್ಯಾಚರಣೆಯಲ್ಲಿ ಅಷ್ಟೇನು ಅನುಭವ ಹೊಂದಿರದ ನೇಪಾಳಕ್ಕೆ ಈ ಭೂಕಂಪ ಭಾರಿ ಹೊಡೆತ ನೀಡಿದ್ದು, ನೆರವಿಗೆ ಬರುವಂತೆ ಜಾಗತಿಕ ಸಮುದಾಯವನ್ನು ಆ ದೇಶ ಕೋರಿಕೊಂಡಿದೆ. ಇದಕ್ಕೆ ಕೂಡಲೇ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್)ಯ 10 ಹಾಗೂ ವೈದ್ಯಕೀಯ ತಂಡಗಳನ್ನು ನೇಪಾಳಕ್ಕೆ ರವಾನಿಸಿದ್ದಾರೆ. ಪರಿಹಾರ ಸಾಮಗ್ರಿಗಳನ್ನು ಹೊತ್ತು ವಾಯುಪಡೆ ವಿಮಾನಗಳಲ್ಲಿ ಭಾರತೀಯ ಸೇನೆ ಈಗಾಗಲೇ ನೇಪಾಳ ತಲುಪಿದ್ದು 'ಆಪರೇಷನ್ ಮೈತ್ರಿ' ಹೆಸರಿನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.