ಬೆಂಗಳೂರು : ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ ಹಾಗೂ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಒಕ್ಕೂಟ ಶನಿವಾರ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಬೆಂಗಳೂರಿನಲ್ಲಿರುವ ಫೋರಂ ಮಾಲ್, ಆಟೊ ಯೂನಿಯನ್, ಚಿತ್ರಮಂದಿರ, ಸಾರಿಗೆ ಸಂಸ್ಥೆ, ಟ್ಯಾಕ್ಸಿ ಯೂನಿಯನ್ ವಕೀಲರ ಸಂಘ, ನೌಕರರ ಸಂಘ, ಪೆಟ್ರೋಲ್ ಬಂಕ್ ಸೇರಿದಂತೆ ನೂರಾರು ಸಂಘಟನೆಗಳು ಬೆಂಬಲ ಘೋಷಿಸಿವೆ.
ಬೆಳಗ್ಗೆ 6ರಿಂದ ಆರಂಭವಾಗಿರುವ ಬಂದ್ ಸಂಜೆ 6ರವರೆಗೆ ಬಂದ್ ನಡೆಯಲಿದೆ. ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯದಲ್ಲಿ ಸಮಸ್ತ ಕನ್ನಡಿಗರಿಂದ ಶಕ್ತಿ ಪ್ರದರ್ಶನ ನಡೆಯಲಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. 30ದಿನದೊಳಗೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವಂತೆ ಮನವಿ ಮಾಡಿಕೊಳ್ಳಲಾಗುವುದಾಗಿ ತಿಳಿಸಿದ್ದಾರೆ.
ಕನ್ನಡ ಪರ ಸಂಘಟನೆಗಳ ಕರ್ನಾಟಕ ಬಂದ್ ಗೆ ಬಹುತೇಕ ಎಲ್ಲಾ ಸಂಘಟನೆಗಳು ಬೆಂಬಲ ಘೋಷಿಸಿದ್ದರಿಂದ ಅಂಗಡಿ, ಮುಂಗಟ್ಟು, ಮಾಲ್, ಹೋಟೆಲ್ ಬಂದ್ ಆಗಲಿದೆ. ಬಿಎಂಟಿಸಿ ಬೆಳಗ್ಗೆ 10ಗಂಟೆ ನಂತರ ಮುಂಜಾಗ್ರತಾ ಕ್ರಮವಾಗಿ ಸಂಚಾರ ನಿಲ್ಲಿಸುವ ಸಾಧ್ಯತೆ ಇದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಲಿದೆ. ಸಂಜೆ 6ರ ನಂತರ ಬಸ್ ಸಂಚಾರ ಸೇರಿದಂತೆ ಹೋಟೆಲ್, ಮಾಲ್, ರಿಕ್ಷಾ ಸಂಚಾರ ಎಂದಿನಂತೆ ಆರಂಭವಾಗಲಿದೆ.
ಕರ್ನಾಟಕ ಬಂದ್ ಗೆ ರಾಜ್ಯ ಸರ್ಕಾರದ ಬೆಂಬಲ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬಂದ್ ಆಚರಿಸುವವರು ಆಚರಿಸಲಿ, ಕಾನೂನು ಉಲ್ಲಂಘಿಸದಂತೆ ಶಾಂತಿಯುತವಾಗಿ ಬಂದ್ ನಡೆಸುವಂತೆ ಸಲಹೆ ನೀಡಿದ್ದಾರೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಮೇಕೆದಾಟು ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ