ಅಹಮದಾಬಾದ್ : ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್ ನಲ್ಲಿ ಹಿಂದೂ ಬಹುಸಂಖ್ಯಾತರು ವಾಸಿಸಿಕೊಂಡಿರುವ ಪ್ರದೇಶಗಳಲ್ಲಿ ಮುಸ್ಲಿಮರು ತಮ್ಮ ಆಸ್ತಿಪಾಸ್ತಿ, ಮನೆಗಳನ್ನು ಮಾರಿ ಗುಳೇ ಹೋಗುವಂತೆ ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್ ಒತ್ತಡ ತಂತ್ರ ಹೇರುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ರದ್ದಿ ವಸ್ತುಗಳ ವ್ಯವಹಾರ ನಿರತ ಅಲಿ ಅಸ್ ಗರ್ ಝವೇರಿ ಎಂಬ ಬೊಹ್ರಾ ಮುಸ್ಲಿಮ್ ವ್ಯಾಪಾರಿ ಹಿಂದೂ ಪ್ರಾಬಲ್ಯದ ಭಾವನಗರದಲ್ಲಿ ಒಂದು ಬಂಗ್ಲೆಯನ್ನು ಕಳೆದ ವರ್ಷ ಜನವರಿ 10ರಂದು ಖರೀದಿಸಿದ್ದರು. ಆದರೆ ಈ ಬಂಗ್ಲೆಯನ್ನು ಹಿಂದುಗಳಿಗೆ ಮಾರುವಂತೆ ಆತನ ಮೇಲೆ ಹಿಂದು ಸಂಘಟನೆಗಳ ಕಾರ್ಯಕರ್ತರು ಅತೀವವಾದ ಒತ್ತಡವನ್ನು ಹೇರಿದರು.
ಈ ಮನೆಯನ್ನು ಹಿಂದುಗಳಿಗೆ ಬಾಡಿಗೆಗೆ ಕೊಡುವ ಅಥವಾ ಸಿನೇಮಾ ಚಿತ್ರೀಕರಣಗಳಿಗೆ ಬಾಡಿಗೆಗೆ ಕೊಡುವ ಆತನ ಯಾವುದೇ ಪ್ರಯತ್ನಗಳು ಈ ಒತ್ತಡ ತಂತ್ರದಿಂದಾಗಿ ಫಲಿಸದೇ ಹೋದವು.
ಅಂತಿಮವಾಗಿ ಝವೇರಿ ತನ್ನ ಈ ಬಂಗ್ಲೆಯನ್ನು 3 ಜೈನರ ಪಾಲುದಾರಿಕೆಯ ಭೂಮಿತಿ ಅಸೋಸಿಯೇಟ್ಸ್ ಎಂಬ ರಿಯಲ್ ಎಸ್ಟೇಟ್ ಕಂಪೆನಿಗೆ ಮಾರಿದರು. ಈ ರಿಯಲ್ ಎಸ್ಟೇಟ್ ಸಂಸ್ಥೆ ಝವೇರಿಯ ಬಂಗ್ಲೆಯನ್ನು ನೆಲಸಮ ಮಾಡಿ ಅಲ್ಲಿ ದೊಡ್ಡ ಅಪಾರ್ಟ್ ಮೆಂಟ್ ಕಟ್ಟಲು ಈಗ ಮುಂದಾಗಿದೆ.
ಭಾವನಗದ ಮೇಘನೀ ವೃತ್ತ ಪ್ರದೇಶವು ಹಿಂದುಗಳ ಬಾಹುಳ್ಯವನ್ನು ಹೊಂದಿದೆ. ಇಲ್ಲಿ ಸುಮಾರು 150 ಬಂಗಲೆಗಳಿವೆ. ಇವುಗಳಲ್ಲಿ ಮುಸ್ಲಿಮ್ ಒಡೆತನದ ಬಂಗಲೆಗಳು ಕೇವಲ ನಾಲ್ಕು. ಈ ನಾಲ್ಕರ ಪೈಕಿ ಎರಡು ಬಂಗಲೆಗಳಲ್ಲಿದ್ದ ಮುಸ್ಲಿಮರು 2002ರ ದೊಂಬಿಯ ವೇಳೆ ಶಿಶು ವಿಹಾರ ಪ್ರದೇಶಕ್ಕೆ ವಲಸೆ ಹೋದರು.
ಝವೇರಿ ಅವರು ಈ ಮೊದಲು ಈ ಪ್ರದೇಶದಲ್ಲಿ 49 ಲಕ್ಷ ರೂ.ಗೆ ಕಿಶೋರ್ಸಿನ್ಹಾ ಗೋಹಿಲ್ ಎಂಬವರಿಂದ ಒಂದು ಬಂಗಲೆಯನ್ನು ಖರೀದಿಸಿದ್ದರು. ಆದರೆ ಒಡನೆಯೇ ಇಲ್ಲಿನ ಹಿಂದೂ ವಾಸಿಗಳು ಝವೇರಿ ವಿರುದ್ಧ ಪ್ರತಿಭಟನೆಗೆ ಮುಂದಾದರು.
ಮುಸ್ಲಿಮರ ಆಹಾರ ಕ್ರಮದಿಂದಾಗಿ ತಮಗೆ ತೊಂದರೆಯಾಗುತ್ತದೆ ಎಂಬುದು ಅವರ ವಾದವಾಗಿತ್ತು. ಅಲ್ಲದೇ ತಮ್ಮ ವಾಸ್ತವ್ಯದ ಪ್ರದೇಶಕ್ಕೆ ಒಬ್ಬ ಮುಸ್ಲಿಮನ ಪ್ರವೇಶವಾದರೆ ಬಳಿಕ ಮುಸ್ಲಿಮರ ಪ್ರವಾಹವೇ ಇಲ್ಲಿಗೆ ಹರಿದು ಬರುತ್ತದೆ ಎಂಬ ಭಯವನ್ನು ಅವರು ವ್ಯಕ್ತಪಡಿಸಿದರು. ಹಾಗಾಗಿ ಝವೇರಿ ಅವರಿಗೆ ಇಲ್ಲಿ ತಾವು ಖರೀದಿಸಿದ ಬಂಗಲೆಗೆ ಬರಲು ಸಾಧ್ಯವಾಗಲೇ ಇಲ್ಲ. ಅದನ್ನವರು ಕೊನೆಗೆ ಹಿಂದು ವ್ಯಕ್ತಿಯೊಬ್ಬರಿಗೆ ಮಾರಿದರು.
ಭಾವನಗರದಂತಹ ಹಿಂದುಗಳ ಬಾಹುಳ್ಯವಿರುವ ವಸತಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ರಾಮ ದರ್ಬಾರ್, ಭಜನೆ ಇತ್ಯಾದಿಗಳು ಪ್ರತೀ ದಿನ ಸಂಜೆ ಎಂಬಂತೆ ನಡೆಯುತ್ತಿರುತ್ತವೆ. ಇವುಗಳಿಂದಾಗಿ ಈ ಪ್ರದೇಶಗಳಲ್ಲಿ ತಾವು ಓಡಾಡುವುದು, ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗುವುದು ಇತ್ಯಾದಿಗಳಿಗೆ ಸಂಕೋಚ ಉಂಟಾಗುತ್ತದೆ ಎಂಬುದು ಮುಸ್ಲಿಮರ ಅಳಲು ಕೂಡ ಆಗಿದೆ.
ಕಳೆದ ವರ್ಷ ಭಾವನಗರದಲ್ಲಿ ಝವೇರಿ ಬಂಗಲೆಯನ್ನು ಕೊಂಡಾಗ ಈ ಹಿಂದೂ ಪ್ರಾಬಲ್ಯದ ವಸತಿ ಪ್ರದೇಶದಲ್ಲಿ ನಡೆಯುತ್ತಿದ್ದ ರಾಮ ದರ್ಬಾರ್ಗೆ ಪ್ರವೀಣ್ ಭಾಯ್ ತೊಗಾಡಿಯಾ ಅವರನ್ನು ಕರೆಸಲಾಯಿತು. ಆಗ ಈ ರಾಮ ದರ್ಬಾರ್ನಲ್ಲಿ ಭಾಷಣ ಮಾಡಿದ್ದ ತೊಗಾಡಿಯಾ, ಮುಂದಿನ 48 ಗಂಟೆಗಳಲ್ಲಿ ಝವೇರಿ ಇಲ್ಲಿನ ತನ್ನ ಬಂಗಲೆಯನ್ನು ತೊರೆಯದಿದ್ದರೆ ಆತನ ಮೇಲೆ ದಾಳಿ ಮಾಡಿ ಎಂದು ಕಿಡಿ ಕಾರಿದ್ದರು. ತೊಗಾಡಿಯಾ ಅವರು ಈ ಕೋಮು ವೈಷಮ್ಯದ ಭಾಷಣಕ್ಕಾಗಿ ಪೊಲೀಸರು ಅವರ ವಿರುದ್ಧ ಆಗಲೇ ಕೇಸು ದಾಖಲಿಸಿಕೊಂಡಿದ್ದರು.
ನಮ್ಮ ಚಳವಳಿಯಿಂದಾಗಿ ಹಿಂದು ಬಾಹುಳ್ಯದ ವಸತಿ ಪ್ರದೇಶಗಳಲ್ಲಿ ವಿಧರ್ಮಿಗಳು ಬಂದು ನೆಲಸುವ ಧೈರ್ಯ ಮಾಡುವುದಿಲ್ಲ ಎಂದು ಭಾವನಗರ ವಿಎಚ್ಪಿ ಘಟಕದ ಅಧ್ಯಕ್ಷ ಎಸ್ ಡಿ ಜನಿ ಹೇಳಿದ್ದಾರೆ.