ನವದೆಹಲಿ : ಮುಂಬೈ ದಾಳಿ ಪ್ರಕರಣದಲ್ಲಿ ಭಾರತಕ್ಕೆ ಬೇಕಿರುವ ಉಗ್ರ ಹಫೀಜ್ ಸಯೀದ್ ಕಾಶ್ಮೀರದಲ್ಲಿ ನಡೆಯುತ್ತಿರುವ ದಾಳಿಯ ಮಾಸ್ಟರ್ ಮೈಂಡ್ ಎನ್ನುವುದು ಸಾಬೀತಾಗಿದೆ.
ಕಳೆದ ಮೂರು ವಾರಗಳಲ್ಲಿ ಉಗ್ರ ಹಫೀಜ್ ಸಯೀದ್, ಜಮ್ಮು-ಕಾಶ್ಮೀರ ಹಾಗೂ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾನೆ. ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರ ಕೃತ್ಯಗಳಿಗೆ ಹಫೀಜ್ ಸಯೀದ್, ಮಾಸ್ಟರ್ ಮೈಂಡ್ ಎಂದು ಗುಪ್ತಚರ ಇಲಾಖೆಗಳು ತಿಳಿಸಿವೆ.
ಏ.7ರಂದು ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರು ಹಾಗೂ ಪೊಲೀಸರ ನಡುವಿನ ಗುಂಡಿನ ಚಕಮಕಿಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದರು. ಈ ದಾಳಿ ಕೂಡಾ ಹಫೀಜ್ ಸಯೀದ್ ನ ಕಾರ್ಯತಂತ್ರದ ಒಂದು ಭಾಗವಾಗಿತ್ತು ಎಂದು ಗುಪ್ತಚರ ಇಲಾಖೆ ಹೇಳಿದೆ. ಹಫೀಜ್ ಸಯೀದ್ ತನ್ನ ಕಾರ್ಯತಂತ್ರವನ್ನು ಮುಂದುವರೆಸಲಿದ್ದು, ಮತ್ತಷ್ಟು ಉಗ್ರರ ದಾಳಿ ನಡೆಯುವ ಸಂಭವವಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ದೆಹಲಿ ಪೊಲೀಸರಿಗೂ ಎಚ್ಚರಿಕೆ ರವಾನೆ ಮಾಡಿದ್ದ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್ -ಇ- ಮೊಹಮ್ಮದ್ ಸಂಘಟನೆ ಫಿದಾಯೀನ್ ಮಾದರಿಯ ದಾಳಿ ನಡೆಸಲು ಯತ್ನಿಸುತ್ತಿದೆ ಎಂದು ತಿಳಿಸಿತ್ತು.
ಇದೇ ವೇಳೆ ಸರ್ಕಾರದ ಭಾಗವಾಗಿರುವವರನ್ನೂ ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು, ಉಗ್ರ ಹಫೀಜ್ ಸಯೀದ್ ಯೋಜನೆ ರೂಪಿಸುತ್ತಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.