ನವದೆಹಲಿ : ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆಸುವಾಗ ನಾಗರಿಕರನ್ನು ಗುರಿಯಾಗಿಸಿ ಕೊಳ್ಳಬೇಡಿ. ಬದಲಿಗೆ ಭದ್ರತಾ ಪಡೆಗಳನ್ನು ಕೇಂದ್ರೀಕರಿಸಿ ದಾಳಿ ನಡೆಸಿ ಎಂದು ಉಗ್ರಗಾಮಿ ಸಂಘಟನೆಗಳಿಗೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐ.ಎಸ್.ಐ ಹಾಗೂ ಪಾಕ್ ಸೇನೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ.
ಭಯೋತ್ಪಾದಕ ಕೃತ್ಯಗಳಲ್ಲಿ ಅಮಾಯಕ ಜನರು ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಶಕ್ತಿಗಳು ಒಗ್ಗೂಡುತ್ತಿರುವುದರಿಂದ ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಹಾಗೂ ಹಿಜ್ಬುಲ್ ಮುಜಾಹಿದೀನ್ ನಂತಹ ಉಗ್ರ ಸಂಘಟನೆಗಳಿಗೆ ಐ.ಎಸ್.ಐ ಹಾಗೂ ಸೇನೆ ಈ ರೀತಿಯ ಸೂಚನೆ ಕೊಟ್ಟಿವೆ ಎಂದು ಗುಪ್ತಚರ ಮಾಹಿತಿ ಉಲ್ಲೇಖೀಸಿ ಗೃಹ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ಇದಕ್ಕೆ ಇಂಬು ನೀಡುವಂತೆ ಜಮ್ಮು-ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುವ ಪ್ರಕರಣಗಳು ಹೆಚ್ಚಾಗಿವೆ. ಮಾ.20ರಂದು ಜಮ್ಮುವಿನ ಕಠುವಾ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಮೂವರು ಸಿಬ್ಬಂದಿಯನ್ನು ಉಗ್ರರು ಹತ್ಯೆಗೈದಿದ್ದರು. ಮಾ.21ರಂದು ಸಾಂಬಾದಲ್ಲಿನ ಜಮ್ಮು-ಪಠಾಣ್ ಕೋಟ್ ಹೆದ್ದಾರಿಯಲ್ಲಿರುವ ಸೇನಾ ಶಿಬಿರದ ಮೇಲೆ ದಾಳಿ ನಡೆದಿತ್ತಾದರೂ ಯೋಧರೇ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದರು. ಈ ನಡುವೆ ಸೋಮವಾರ ಕೂಡ ಮೂವರು ಪೊಲೀಸರನ್ನು ಉಗ್ರರು ಕೊಂದಿದ್ದಾರೆ.