ನವದೆಹಲಿ : ರಾಜ್ಯ ಸಚಿವ ಸಂಪುಟ ವಿಸ್ತರಣೆ, ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಜೊತೆಗೆ ಚರ್ಚಿಸಿದ ವಿಷಯ ಬಹಿರಂಗಪಡಿಸಲ್ಲ. ಏನು ಆಗಬೇಕೋ ಅದು ಆಗುವ ಸಮಯಕ್ಕೆ ನಡೆಯುತ್ತೆ ಎಂದಷ್ಟೇ ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದರು.
ನವದೆಹಲಿಯ 10ನೇ ಜನಪಥ್ ನಿವಾಸದಲ್ಲಿ ಸೋನಿಯಾ ಗಾಂಧಿ ಜೊತೆ ಸಿದ್ದರಾಮಯ್ಯನವರು ಕೇವಲ 10 ನಿಮಿಷಗಳ ಕಾಲ ಮಾತುಕತೆ ನಡೆಸಿ, ನಂತರ ದೆಹಲಿಯ ಕರ್ನಾಟಕ ಭವನಕ್ಕೆ ವಾಪಸ್ ಆಗಿದ್ದರು.
ಭಾನುವಾರ ದೆಹಲಿಯಲ್ಲಿ ನಡೆದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾತ್ರಿ ದೆಹಲಿಯಲ್ಲೇ ಬೀಡುಬಿಟ್ಟಿದ್ದರು. ಸೋಮವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಸದ್ಯದ ಮಟ್ಟಿಗೆ ಮಾಡುವುದು ಬೇಡ ಎಂದು ಮನವರಿಕೆ ಮಾಡಿಕೊಡುವ ನಿರ್ಧಾರದಲ್ಲಿದ್ದರು. ಆದರೆ ಇಂದು ನಡೆದ ಮಾತುಕತೆಯಲ್ಲಿ ಯಾವೆಲ್ಲ ವಿಷಯ ಪ್ರಸ್ತಾಪವಾಗಿದೆ ಎಂಬ ವಿಷಯ ಬಹಿರಂಗವಾಗಿಲ್ಲ.