Untitled Document
Sign Up | Login    
Dynamic website and Portals
  
April 4, 2015

ಬಿ.ಎಸ್.ವೈಗೆ ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಲಾಬಿ

ಬಿ.ಎಸ್.ಯಡಿಯೂರಪ್ಪ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು : ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷರ ಹುದ್ದೆಯ ಅವಧಿ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಮುಂದಿನ ಅಧ್ಯಕ್ಷರಾಗಲು ಈಗಲೇ ಲಾಬಿ ಆರಂಭವಾಗಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮತ್ತೂಮ್ಮೆ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ಬೇಡಿಕೆ ಬಹಿರಂಗವಾಗಿ ಹೊರಬಿದ್ದಿದೆ.

ಪಕ್ಷದ ಮೂರು ದಿನಗಳ ಮಹತ್ವದ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿರುವ ವೇಳೆಯೇ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಅವರು ಈ ಹೇಳಿಕೆ ನೀಡಿರುವುದು ಮುಂದಿನ ಬೆಳವಣಿಗೆಗಳ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಾರ್ಯಕಾರಿಣಿ ಸಭೆ ಆರಂಭವಾಗುವ ಮೊದಲು ಬೆಂಗಳೂರಿನ ಹೋಟೆಲ್‌ ಲಲಿತ್‌ ಅಶೋಕಾದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವು ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ವಹಿಸಬೇಕು ಎಂದು ಸ್ಪಷ್ಟ ಮಾತುಗಳಲ್ಲಿ ಒತ್ತಾಯಿಸಿದರು.

ಯಡಿಯೂರಪ್ಪ ಅವರು ಈ ಹಿಂದೆ ರಾಜ್ಯಾಧ್ಯಕ್ಷರಾಗಿದ್ದ ವೇಳೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸಿದ್ದರು. ಅಲ್ಲದೇ, ಪಕ್ಷವನ್ನು ರಾಜ್ಯದಲ್ಲಿ ಆಡಳಿತಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗಲೂ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಎಲ್ಲ ನಾಯಕರನ್ನು ಒಗ್ಗೂಡಿಸಿ ಪಕ್ಷವನ್ನು ಸದೃಢಗೊಳಿಸಲು ಸಮರ್ಥರಿದ್ದಾರೆ ಎಂದು ಪ್ರತಿಪಾದಿಸಿದರು.

ಯಡಿಯೂರಪ್ಪ ಕೇವಲ ಯಾವುದೋ ಒಂದು ವರ್ಗದ ನಾಯಕರಲ್ಲ. ಎಲ್ಲ ವರ್ಗದ ನಾಯಕರಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವ ಸಾಮ್ಯರ್ಥ ಅವರಿಗೆ ಇದೆ. ಇದನ್ನು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದೂ ಅವರು ಹೇಳಿದರು.

ಪಕ್ಷದ ಹಾಲಿ ಅಧ್ಯಕ್ಷ ಪ್ರಹ್ಲಾದ್‌ ಜೋಶಿ ಅವರ ಅವಧಿ ಬರುವ 2016ರ ಮಾರ್ಚ್‌ ತಿಂಗಳಲ್ಲಿ ಕೊನೆಗೊಳ್ಳಲಿದೆ. ಇದೇ ವರ್ಷಾಂತ್ಯದಲ್ಲಿ ಪಕ್ಷದ ಸಾಂಸ್ಥಿಕ ಚುನಾವಣೆಗಳು ನಡೆಯಲಿವೆ. ಅನಂತರ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರಕಲಿದೆ. ಹೊಸ ಅಧ್ಯಕ್ಷರ ನೇತೃತ್ವದಲ್ಲಿಯೇ ಮುಂದಿನ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಆ ಸ್ಥಾನ ಅಲಂಕರಿಸಲು ಬಿಜೆಪಿಯಲ್ಲಿ ಈಗಿನಿಂದಲೇ ಪ್ರಯತ್ನ ಆರಂಭವಾಗಿದೆ.

ಪ್ರಭಾಕರ್ ಕೋರೆ ಮಾತ್ರವಲ್ಲ ಯಡಿಯೂರಪ್ಪ ಅವರ ಪರ ಒಲವು ಹೊಂದಿರುವವರು ಪಕ್ಷದಲ್ಲಿ ಅನೇಕ ಸಂಖ್ಯೆಯಲ್ಲಿದ್ದಾರೆ. ಶಾಸಕರು ಮತ್ತು ಸಂಸದರ ಪೈಕಿ ಹೆಚ್ಚಿನವರು ಯಡಿಯೂರಪ್ಪ ಅವರೇ ಮುಂದಿನ ನಾಯಕತ್ವ ವಹಿಸಿಕೊಳ್ಳಬೇಕು. ಆದರೆ, ಆ ಬೇಡಿಕೆ ಮುಂದಿಡಲು ಇನ್ನೂ ಕಾಲಾವಕಾಶ ಇದೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಪರ ಒಬ್ಬೊಬ್ಬರಾಗಿ ಧ್ವನಿ ಎತ್ತುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಆದರೆ, ಹಾಲಿ ಅಧ್ಯಕ್ಷ ಪ್ರಹ್ಲಾದ್‌ ಜೋಶಿ ಅವರನ್ನು ಅವಧಿಗೂ ಮುನ್ನವೇ ಬದಲಾಯಿಸುವ ಬಗ್ಗೆ ಈವರೆಗೆ ಬಿಜೆಪಿ ಹೈಕಮಾಂಡ್‌ ಮಟ್ಟದಲ್ಲಿ ಯಾವುದೇ ಚಿಂತನೆ ನಡೆದಿಲ್ಲ ಎನ್ನುವುದೂ ವಾಸ್ತವ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited