ಬೆಂಗಳೂರು : ಕೃಷಿ ಕ್ಷೇತ್ರಕ್ಕೆ ತಂತ್ರಜ್ಞಾನ ಹಾಗೂ ಮೂಲಸೌಕರ್ಯ ಉನ್ನತೀಕರಣದ ಅವಶ್ಯಕತೆ ಇದೆ. ರೈತರಿಗೆ ಉತ್ತಮ ರಸ್ತೆಗಳು, ಕೃಷಿ ಭೂಮಿಯಲ್ಲಿ ನೀರಿನ ಸೌಕರ್ಯ ಹಾಗೂ ವಿದ್ಯುತ್ ಪೂರೈಕೆ ಅಗತ್ಯವಿದೆ. ಆದರೆ ರೈತರಿಗೆ ಅವಶ್ಯವಾಗಿರುವ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳನ್ನು ವಿರೋಧಿಸುತ್ತಿರುವ ವಿಪಕ್ಷಗಳು ರೈತ ಪರ ಹೋರಾಟದ ಹೆಸರಿನಲ್ಲಿ ನಾಟಕವಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಏ.3ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಪಕ್ಷದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿರೋಧಪಕ್ಷಗಳು ರೈತ ಪರ ಹೋರಾಟದ ಹೆಸರಿನಲ್ಲಿ ನಾಟಕವಾಡುತ್ತಿರುವುದನ್ನು ನೋಡಿ ಆಶ್ಚರ್ಯವಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
ನಮ್ಮ ಧ್ವಜದಲ್ಲಿ 4 ಬಣ್ಣಗಳಿವೆ, ಅಂತೆಯೇ ನಮ್ಮ ದೇಶದಲ್ಲಿ ನಾಲ್ಕು ತೀರಿಯ ಕ್ರಾಂತಿ ಉಂಟಾಗಬೇಕು ಶ್ವೇತ ವರ್ಣ ಕ್ಷೀರ ಕ್ರಾಂತಿಯನ್ನು ಪ್ರತಿನಿಧಿಸುತ್ತದೆ. ನೀಲವರ್ಣ ಸಂಪತ್ತು ಕ್ರಾಂತಿಯನ್ನು ಪ್ರತಿನಿಧಿಸುತ್ತದೆ. ಹಸಿರು ಕೃಷಿ ಹಾಗೂ ಕೇಸರಿ ಸಾಮರ್ಥ್ಯದ ಕ್ರಾಂತಿಯನ್ನು ಪ್ರತಿನಿಧಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿಯಾಗುವುದಕ್ಕೂ ಮುನ್ನ ಕರ್ನಾಟಕಕ್ಕೆ ಆಗಮಿಸಿದ್ದಾಗ, ಕಾಂಗ್ರೆಸ್ಸಿನ ಭ್ರಷ್ಟಾಚಾರಗಳೇ ಸುದ್ದಿಯಾಗುತ್ತಿದ್ದವು, ಇಂದು ರೈತರ ಪರ ಹೋರಾಟ ನಡೆಸುವುದಾಗಿ ಹೇಳುತ್ತಿರುವ ಪಕ್ಷಗಳು ರೈತರಿಗೆ ಅನ್ಯಾಯ ಮಾಡಿವೆ. 'ನಾನು ಬಡ ಕುಟುಂಬದ ಹಿನ್ನೆಲೆಯುಳ್ಳವರಾಗಿದ್ದು ನನಗೆ ರೈತರ ಸಮಸ್ಯೆಗಳು, ನೋವು ತಿಳಿಯುತ್ತದೆ' ಎಂದಿರುವ ಪ್ರಧಾನಿ ಮೋದಿ, ರೈತರ ಅನುಕೂಲಕ್ಕಾಗಿ ಭೂಸುಧಾರಣೆಗಳನ್ನು ತರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ರಾಜ್ಯಗಳ ಅಭಿವೃದ್ಧಿಗಾಗಿ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಕಲ್ಲಿದ್ದಲ ಬಗ್ಗೆ ಮಾತನಾಡಿದರೆ ಜನರು ಈ ಹಿಂದಿನ ಸರ್ಕಾರವನ್ನು ನಿಂದಿಸುತ್ತಿದ್ದರು, ಆದರೆ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಕಲ್ಲಿದ್ದಲ ಮೌಲ್ಯವನ್ನು ಚಿನ್ನದ ಮೌಲ್ಯವನ್ನಾಗಿ ಪರಿವರ್ತನೆ ಮಾಡಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.
ಭಾರತದ ಅಭಿವೃದ್ಧಿಯಲ್ಲಿ ರಾಜ್ಯಗಳಿಗೆ ಸಮಾನ ಹಕ್ಕಿದೆ, ರಾಜ್ಯಗಳಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಅದನ್ನು ಲೆಕ್ಕಿಸದೇ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಮೋದಿ ತಿಳಿಸಿದ್ದಾರೆ.