ಬೆಂಗಳೂರು : ಬಿಜೆಪಿಯ ಮಹತ್ವದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಗುರುವಾರದಿಂದ 3 ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ.
ಸಭೆಯಲ್ಲಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದ ನಂತರ ಎದುರಿಸಿದ ಸೋಲು-ಗೆಲುವುಗಳ ಆತ್ಮಾವಲೋಕನ ಸೇರಿದಂತೆ ಸರ್ಕಾರ ಮತ್ತು ಪಕ್ಷ ಮುಂದೆ ಅನುಸರಿಸಬೇಕಾದ ಹೆಜ್ಜೆಯ ಬಗ್ಗೆ ಕಾರ್ಯತಂತ್ರ ರೂಪಿಸುವ ಸಂಬಂಧ ಚರ್ಚೆಗಳು ನಡೆಯಲಿವೆ.
ಕಳೆದ ಹತ್ತು ತಿಂಗಳ ಅಧಿಕಾರಾವಧಿಯ ಸಾಧನೆಗಳು ಮತ್ತು ವೈಫಲ್ಯಗಳ ಬಗ್ಗೆ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಮುಕ್ತ ಚರ್ಚೆ ನಡೆಯುವ ಸಾಧ್ಯತೆಯಿದ್ದು, ದಕ್ಷಿಣ ಭಾರತದಲ್ಲಿ ದುರ್ಬಲವಾಗಿರುವ ಪಕ್ಷದ ಸಂಘಟನೆಯನ್ನು ಬಲಗೊಳಿಸುವ ಬಗ್ಗೆಯೂ ಸಮಾಲೋಚನೆ ನಡೆಸಲು ಉದ್ದೇಶಿಸಲಾಗಿದೆ. ಜತೆಗೆ ದಕ್ಷಿಣ ಭಾರತದ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿನ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಾಗುತ್ತದೆ. ಅಲ್ಲದೆ, ಮುಂಬರುವ ವಿವಿಧ ರಾಜ್ಯಗಳಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಗಳಿಗೆ ಈಗಿನಿಂದಲೇ ಸಿದ್ಧತೆ ನಡೆಸುವ ಬಗ್ಗೆಯೂ ತಂತ್ರ ರೂಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬುಧವಾರ ರಾತ್ರಿಯೇ ನಗರಕ್ಕೆ ಆಗಮಿಸಿ, ಕಾರ್ಯಕಾರಿಣಿಯ ಸಂಪೂರ್ಣ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಅವರೊಂದಿಗೆ ಹಲವು ರಾಷ್ಟ್ರೀಯ ಪದಾಧಿಕಾರಿಗಳೂ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ಅನೇಕ ಕೇಂದ್ರ ಸಚಿವರು ಹಾಗೂ ನಾಯಕರು ಗುರುವಾರ ಮಧ್ಯಾಹ್ನ ನಗರಕ್ಕೆ ಆಗಮಿಸಲಿದ್ದಾರೆ.
ಚರ್ಚೆಯಾಗಲಿರುವ ವಿಷಯಗಳು:
1 ಕಳೆದ ಹತ್ತು ತಿಂಗಳ ಅವಧಿಯ ಕೇಂದ್ರ ಸರ್ಕಾರದ ಸಾಧನೆ-ವೈಫಲ್ಯ
2 ಸರ್ಕಾರ ಮುಂದಿನ ದಿನಗಳಲ್ಲಿ ಅನುಸರಿಸ ಬೇಕಾದ ಹೆಜ್ಜೆ, ಆದ್ಯತೆ ನೀಡಬೇಕಾದ ಕ್ಷೇತ್ರಗಳು
3 ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರತಿಪಕ್ಷಗಳ ಟೀಕೆಗಳನ್ನು ಎದುರಿಸುವ ಬಗೆ
4 ಹಿಂದುತ್ವದ ಬಗ್ಗೆ ಸ್ವಪಕ್ಷೀಯರು ನೀಡಿರುವ ವಿವಾದಾದ್ಮತ ಹೇಳಿಕೆಗಳು
5 ಮುಂಬರುವ ವಿವಿಧ ರಾಜ್ಯಗಳ ವಿಧಾನ ಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ
6 ಉತ್ತರ ಭಾರತದ ನಂತರ ದೇಶದ ಇತರ ಭಾಗಗಳಲ್ಲಿ ಪಕ್ಷದ ಸಂಘಟನೆ ಬಲವರ್ಧನೆ
7 ಪಕ್ಷದ ಸದಸ್ಯತ್ವ ನೋಂದಣಿ ತೀವ್ರಗೊಳಿಸಿ ದೇಶದಲ್ಲಿ 10 ಕೋಟಿಯ ಗುರಿ ತಲುಪುವುದು