ಶ್ರೀನಗರ : ಕಾಶ್ಮೀರ ಮೂಲಕ ನಾಲ್ವರು ಉಗ್ರರು ಭಾರತದೊಳಕ್ಕೆ ನುಸುಳಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಅವರು ದಾಳಿ ನಡೆಸಬಹುದು ಎಂದು ಗುಪ್ತಚರದಳ ಎಚ್ಚರಿಕೆ ನೀಡಿದೆ.
ಕಳೆದ ವಾರ ಜಮ್ಮು-ಕಾಶ್ಮೀರದ ಸಾಂಬಾ ಹಾಗೂ ಕಠುವಾದಲ್ಲಿ ದಾಳಿ ನಡೆಸಿ ಪ್ರಾಣ ತೆತ್ತ ನಾಲ್ವರು ಉಗ್ರರ ಜತೆಗೇ ಇನ್ನೂ ನಾಲ್ವರು ಉಗ್ರರು ಬಂದಿರಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಕಳೆದ ವಾರ ಉಗ್ರರು ಸಾಂಬಾದ ಮೂಲಕ ಕಾಶ್ಮೀರಕ್ಕೆ ಪ್ರವೇಶಿಸಿದ್ದರು. ಆ ಪೈಕಿ ಇಬ್ಬರು ಸಾಂಬಾ ಜಿಲ್ಲೆಯ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ಹತರಾಗಿದ್ದರು. ಇನ್ನಿಬ್ಬರು ಕಠುವಾದ ಪೊಲೀಸ್ ಠಾಣೆಯೊಂದಕ್ಕೆ ನುಗ್ಗಿದ್ದರು. ಅವರನ್ನು ಅಲ್ಲಿ ಹೊಡೆದುರುಳಿಸಲಾಗಿತ್ತು. ಹತ್ಯೆಯಾದ ಉಗ್ರರಿಂದ ಸಿಕ್ಕ ಮಾಹಿತಿ ಪ್ರಕಾರ, ಇನ್ನೂ ನಾಲ್ವರು ಉಗ್ರರು ಇವರ ಜತೆಗೇ ದೇಶದೊಳಕ್ಕೆ ಬಂದಿದ್ದಾರೆ. ಕಾಶ್ಮೀರ ಮಾತ್ರವೇ ಅಲ್ಲದೆ, ದೆಹಲಿಯಲ್ಲೂ ದಾಳಿ ಮಾಡುವ ಉದ್ದೇಶ ಈ ಸದಸ್ಯರಿಗೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಉಗ್ರರು ಇನ್ನೂ ಜಮ್ಮು-ಕಾಶ್ಮೀರದಲ್ಲೇ ಇದ್ದಾರಾ ಅಥವಾ ಬೇರೆ ಕಡೆ ತೆರಳಿದ್ದಾರಾ ಎಂಬುದು ಗೊತ್ತಾಗಿಲ್ಲ.
ಕಂದಹಾರ್ ವಿಮಾನ ಅಪಹರಣ ಪ್ರಕರಣದ ಸಂದರ್ಭದಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಮೌಲಾನಾ ಮಸೂದ್ ಅಜರ್ ಸ್ಥಾಪಿಸಿರುವ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಜತೆಗೆ ದೇಶಕ್ಕೆ ನುಸುಳಿರುವ ಉಗ್ರರಿಗೆ ನಂಟಿರುವ ಕುರಿತಾದ ಟಿಪ್ಪಣಿಯೊಂದು ದೊರೆತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ ಭಾರತದ ಮೇಲೆ ಮತ್ತೂಂದು ಸುತ್ತಿನ ಭಯೋತ್ಪಾದಕ ದಾಳಿ ನಡೆಸಲು ಯತ್ನಿಸುತ್ತಿರುವ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆ, ಪಾಕಿಸ್ತಾನ ಸೇನೆಯ ನೆರವಿನೊಂದಿಗೆ ಭಾರತ- ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಹೊಸ ಉಗ್ರ ಶಿಬಿರಗಳನ್ನು ಸ್ಥಾಪಿಸಿದೆ ಎಂದು ಮೂಲಗಳು ತಿಳಿಸಿವೆ. ಗಡಿಯಲ್ಲಿ ಹೊಸದಾಗಿ 10 ಉಗ್ರಗಾಮಿ ಶಿಬಿರಗಳು ತಲೆ ಎತ್ತಿದ್ದು ಪಾಕಿಸ್ತಾನ ಸೇನೆಯಿಂದ ತರಬೇತಿ ಪಡೆದ ಉಗ್ರರನ್ನು ಈ ಶಿಬಿರಗಳಿಗೆ ಕರೆತರಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಬಿಎಸ್ ಎಫ್ ವರದಿ ಸಲ್ಲಿಸಿದೆ.