ಇಸ್ಲಾಮಾಬಾದ್ : ಸೌಹಾರ್ದತೆಯ ಸಂಕೇತವಾಗಿ, ಮಾ.21ರಂದು ಪಾಕಿಸ್ತಾನ, ತನ್ನ ವಶದಲ್ಲಿದ್ದ ಭಾರತೀಯ ಮೀನುಗಾರರ 57 ದೋಣಿಗಳನ್ನು ಬಿಡುಗಡೆ ಮಾಡಿದೆ. ಪಾಕ್ ನಲ್ಲಿದ್ದ ದೋಣಿಗಳನ್ನು ಬಿಡುಗಡೆ ಮಾಡಲು ಕಳೆದ ಮೇ ನಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ವಿದೇಶಾಂಗ ಕಚೇರಿ ತಿಳಿಸಿದೆ.
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮೀನುಗಾರರ ದೋಣಿಗಳನ್ನು ಬಿಡುಗಡೆ ಮಾಡುವ ಸಂಬಂಧ ಮಾತುಕತೆ ನಡೆಸಲಾಗಿತ್ತು. ಇದಾದ ನಂತರ ಮಾ.9ರಂದು 8 ಸದಸ್ಯರನ್ನೊಳಗೊಂಡ ನಿಯೋಗ ದೋಣಿಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿತ್ತು.
ದೋಣಿಗಳನ್ನು ಪಾಕಿಸ್ತಾನ ಉತ್ತಮ ಸ್ಥಿತಿಯಲ್ಲೇ ಇರಿಸಿತ್ತಾದರೂ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ನಡೆಸಿ ವಾಪಸ್ ನೀಡಿದೆ. ಕಡಲ ಗಡಿ ಮೂಲಕ ದೋಣಿಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಪಾಕ್ ಪ್ರಧಾನಿ ನವಾಜ್ ಷರೀಫ್ ಆದೇಶದ ಹಿನ್ನೆಲೆಯಲ್ಲಿ ದೋಣಿಗಳನ್ನು ದುರಸ್ತಿಗೊಳಿಸಿ ಭಾರತಕ್ಕೆ ನೀಡಲಾಗಿದೆ. ಉಭಯ ದೇಶಗಳೂ ಕಡಲ ಗಡಿ ಭಾಗದಲ್ಲಿ ಮೀನುಗಾರರನ್ನು ಪದೇ ಪದೇ ಬಂಧಿಸುವುದು ಸಾಮಾನ್ಯವಾಗಿದೆ.