ಜೈಪುರ : ಇತಿಹಾಸದ ಪುಟ ಸೇರಿರುವ ಮುಂಬೈ ದಾಳಿ ಉಗ್ರ ಅಜ್ಮಲ್ ಕಸಬ್ ಬಿರಿಯಾನಿ ಕೇಳಿದ ಬಗ್ಗೆ ಸತ್ಯವೊಂದು ಹೊರಬಿದ್ದಿದೆ.
ಜೈಪುರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ನಿಗ್ರಹದ ಬಗ್ಗೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಸರ್ಕಾರಿ ಅಭಿಯೋಜಕ ಉಜ್ವಲ್ ನಿಕ್ಕಮ್ ಅಜ್ಮಲ್ ಕಸಬ್ ಗೆ ಸಂಬಂಧಿಸಿದ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದಿದ್ದ ಅಜ್ಮಲ್ ಕಸಬ್, ತನ್ನ ವಿರುದ್ಧದ ವಿಚಾರಣೆ ಸಂದರ್ಭದಲ್ಲಿ ಕಣ್ಣೀರಿಟ್ಟಿದ್ದ, ಈ ಬೆಳವಣಿಗೆಯಿಂದ ಮಾಧ್ಯಮಗಳಲ್ಲಿ ಆತನ ಬಗ್ಗೆ ಕರುಣೆ ಉಂಟಾಗುವ ಸಾಧ್ಯತೆ ಇದ್ದಿದ್ದರಿಂದ, ಕಸಬ್ ಬಿರ್ಯಾನಿ ಕೇಳಿದ್ದಾನೆ ಎಂಬ ಸುಳ್ಳು ಹೇಳಿದ್ದಾಗಿ ಉಜ್ವಲ್ ನಿಕ್ಕಮ್ ಸ್ಪಷ್ಟಪಡಿಸಿದ್ದಾರೆ.
ವಾಸ್ತವದಲ್ಲಿ ಅಜ್ಮಲ್ ಕಸಬ್ ಬಿರ್ಯಾನಿ ಕೇಳಿರಲಿಲ್ಲ, ಹಾಗೂ ಸರ್ಕಾರದಿಂದ ಆತನಿಗೆ ಬಿರ್ಯಾನಿಯನ್ನು ಸರಬರಾಜು ಮಾಡಿರಲಿಲ್ಲ. ಆದರೆ ಕಸಬ್ ಕಣ್ಣೀರು ಹಾಕಿದ್ದರ ಹಿನ್ನೆಲೆಯಲ್ಲಿ ಆತನ ಬಗ್ಗೆ ಅನುಕಂಪ ಮೂಡಬಾರದೆಂಬ ಒಂದೇ ಕಾರಣಕ್ಕೆ ಈ ರೀತಿಯ ಸುದ್ದಿಯನ್ನು ಸೃಷ್ಟಿಸಬೇಕಾಯಿತು ಎಂದು ನಿಕ್ಕಮ್ ಹೇಳಿದ್ದಾರೆ.
ವಿಚಾರಣೆ ಹಂತದಲ್ಲಿ ಕಸಬ್ ತನ್ನ ತಲೆ ತಗ್ಗಿಸಿ ಕಣ್ಣೀರಿಟ್ಟಿದ್ದ, ಮಾಧ್ಯಮಗಳು ಇದನ್ನೇ ದೊಡ್ಡ ಸುದ್ದಿ ಮಾಡಿ ಆತನ ಬಗ್ಗೆ ಅನುಕಂಪ ಮೂಡಿಸುವ ಅಪಾಯವಿತ್ತು. ಆದ್ದರಿಂದ ಹೀಗೆ ಮಾಡಬೇಕಾಯಿತು ಎಂದು ಉಜ್ವಲ್ ನಿಕ್ಕಮ್ ತಾವು ಸುಳ್ಳು ಹೇಳಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಮುಂಬೈ ದಾಳಿಯಲ್ಲಿ ಅಮಾಯಕರ ಪ್ರಾಣ ತೆಗೆದಿದ್ದೂ ಅಲ್ಲದೇ, ಕಸಬ್ ಬಿರಿಯಾನಿ ನೀಡಲು ಕೇಳುತ್ತಿದ್ದಾನೆ ಎಂಬ ಸುದ್ದಿ ದೇಶಾದ್ಯಂತ ತೀವ್ರ ಸಂಚಲನ ಉಂಟುಮಾಡಿತ್ತು. ಈ ಸುದ್ದಿಯಿಂದ ಜನತೆಯಲ್ಲಿ ಅಜ್ಮಲ್ ಕಸಬ್ ಬಗೆಗಿನ ಆಕ್ರೋಶ ಮತ್ತಷ್ಟು ಹೆಚ್ಚಾಗಿತ್ತು.