ಇಸ್ಲಾಮಾಬಾದ್ : 2008ರಲ್ಲಿ ನಡೆದ ಮುಂಬೈ ದಾಳಿ ಸಂಚನ್ನು ಪಾಕಿಸ್ತಾನದ ನೆಲದಿಂದಲೇ ಯೋಜಿಸಲಾಗಿತ್ತು ಹಾಗೂ ದಾಳಿಯ ಕಾರ್ಯಾಚರಣೆಯನ್ನು ನಿಯಂತ್ರಿಸಲಾಗಿತ್ತು ಎಂಬ ಮಹತ್ವದ ಮಾಹಿತಿಯನ್ನು ಪಾಕಿಸ್ತಾನದ ಎಫ್.ಐ.ಎ. (ಫೆಡೆರಲ್ ಇನ್ವೆಸ್ಟಿಗೇಟಿಂಗ್ ಏಜೆನ್ಸಿ) ಯ ನಿವೃತ್ತ ಡಿ.ಜಿ. ತಾರೀಖ್ ಖೋಸಾ ಬಹಿರಂಗಗೊಳಿಸಿದ್ದಾರೆ.
ಪಾಕಿಸ್ತಾನದ ಜನಪ್ರಿಯ ಪತ್ರಿಕೆ ಡಾನ್ ಗೆ ಬರೆದ ಲೇಖನವೊಂದರಲ್ಲಿ ತಾರೀಖ್, ಪಾಕಿಸ್ತಾನ ತನ್ನ ನೆಲದಿಂದ ಯೋಜಿಸಿ ಕಾರ್ಯಗತಗೊಂಡ ಮುಂಬೈ ದಾಳಿಯನ್ನು ಈಗ ನಿಭಾಯಿಸಬೇಕಾಗಿದೆ' ಎಂದಿದ್ದಾರೆ.
'ಈ ಬರ್ಬರ ಭಯೋತ್ಪಾದಕ ದಾಳಿಯ ರೂವಾರಿಗಳನ್ನು ಹಾಗೂ ಅಪರಾಧಿಗಳನ್ನು ಶಿಕ್ಷಿಸುವುದಕ್ಕಾಗಿ ಪಾಕಿಸ್ತಾನದ ರಕ್ಷಣಾ ವ್ಯವಸ್ಥೆ ತನ್ನೆಲ್ಲಾ ಪ್ರಯತ್ನಗಳನ್ನೂ ಮಾಡಬೇಕು. ಈ ವಿವಾದ (ದಾಳಿಯ ಬಗ್ಗೆ) ಈಗಾಗಲೇ ಸಾಕಷ್ಟು ಸಮಯ ತೆಗೆದುಕೊಂಡಿದೆ' ಎಂದು ತಾರೀಖ್ ಲೇಖನದಲ್ಲಿ ಬರೆದಿದ್ದಾರೆ.
ಮುಂಬೈ ದಾಳಿ ಸಂಚಿನಲ್ಲಿ ಪಾಕಿಸ್ತಾನದ ಪ್ರತ್ಯಕ್ಷ ಪಾತ್ರವಿತ್ತು ಎಂಬ ಭಾರತ ಪ್ರತಿಪಾದನೆಯನ್ನು ಈ ಸಂಚಿನ ಬಗ್ಗೆ ತನಿಖೆ ನಡೆಸುತ್ತಿದ್ದ ಪಾಕಿಸ್ತಾನದ ಪ್ರಮುಖ ತನಿಖಾಧಿಕಾರಿಯೊಬ್ಬರು ಒಪ್ಪಿಕೊಂಡಿರುವುದು ಮಹತ್ವದ ಬೆಳವಣಿಗೆ ಎನ್ನಲಾಗಿದೆ.
ನವೆಂಬರ್ 26, 2008ರಂದು ಅರಬ್ಬೀ ಸಮುದ್ರದ ಮೂಲಕ ಮುಂಬೈಗೆ ನುಸುಳಿದ 10 ಪಾಕಿಸ್ತಾನಿ ಭಯೋತ್ಪಾದಕರು 166 ನಿರಪರಾಧಿ ಭಾರತೀಯ ನಾಗೂ ವಿದೇಶಿ ನಾಗರಿಕರನ್ನು ಬರ್ಬರವಾಗಿ ಹತ್ಯೆಗೈದಿದ್ದರು. ಈ ದಾಳಿಯಿಂದಾಗಿ ಉಭಯ ದೇಶಗಳ ಮಧ್ಯೆ ಯುದ್ಧ ಆರಂಭವಾಗುವ ಸನ್ನಿವೇಶವೂ ಸೃಷ್ಠಿಯಾಗಿತ್ತು.
ದಾಳಿಯಲ್ಲಿ ಅಜ್ಮಲ್ ಕಸಬ್ ಎಂಬ ಉಗ್ರನನ್ನು ಸೆರೆಹಿಡಿಯಲಾಗಿತ್ತು ಹಾಗೂ ನಂತರ ಅವನನ್ನು ಗಲ್ಲಿಗೇರಿಸಲಾಗಿತ್ತು. ಉಳಿದ ಉಗ್ರರನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿತ್ತು. ಈ ದಾಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದ ಪಾಕಿಸ್ತಾನ ಕೊನೆಗೆ ಕಸಬ್ ಹಾಗೂ ದಾಳಿಯ ರೂವಾರಿಗಳು ಪಾಕಿಸ್ತಾನಿಗಳು ಎನ್ನುವುದನ್ನು ಒಪ್ಪಿಕೊಂಡಿತ್ತು.
ಖೋಸಾ ತನ್ನ ಲೇಖನದಲ್ಲಿ ಕಸಬ್ ಒಬ್ಬ ಪಾಕಿಸ್ತಾನಿ ಎಂದಿದ್ದಾರೆ ಹಾಗೂ ಮುಂಬೈ ದಾಳಿ ನಡೆಸಿದ ಲಷ್ಕರ್-ಎ-ತಾಯ್ಬಾ ಉಘ್ರ ಸಂಘಟನೆಯ ಭಯೋತ್ಪಾದಕರಿಗೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಥಟ್ಟಾ ಎಂಬಲ್ಲಿ ತರಬೇತಿ ನೀಡಿ ಅವರನ್ನು ಸಮುದ್ರ ಮಾರ್ಗವಾಗಿ ಮುಂಬೈಗೆ ಕಳುಹಿಸಲಾಗಿತ್ತು ಎಂದು ವಿವರಿಸಿದ್ದಾರೆ.
'ಪಾಕಿಸ್ತಾನದ ತನಿಖಾಧಿಕಾರಿಗಳು ಉಗ್ರರ ತರಬೇತಿ ಕೇಂದ್ರಗಳನ್ನು ಗುರುತಿಸಿದ್ದಾರೆ ಹಾಗೂ ಈ ಭಯೋತ್ಪಾದಕ ಕೃತ್ಯಕ್ಕೆ ಬಳಸಿದ ಸ್ಪೋಟಕ ವಸ್ತುಗಳ ಕವಚಗಳು ಮುಂತಾದ ವಸ್ತುಗಳನ್ನು ಉಗ್ರರ ತರಬೇತಿ ಕೇಂದ್ರಗಳಿಂದ ವಶಪಡಿಸಿಕೊಂಡು ಅವು ಮುಂಬೈ ದಾಳಿಗೆ ಬಳಸಿದ ವಸ್ತುಗಳನ್ನು ಹೋಲುತ್ತವೆ ಎನ್ನುವುದನ್ನು ಖಚಿತಪಡಿಸಿದ್ದಾರೆ' ಎಂದು ತಾರೀಖ್ ತಿಳಿಸಿದ್ದಾರೆ.
'ಇವಲ್ಲದೆ ಭಯೋತ್ಪಾದಕರು ಅಪಹರಿಸಿ ಬಳಸಿದ ಮೀನುಗಾರರ ದೋಣಿಗಳನ್ನು, ಹಾಗೂ ಹಯೋತ್ಪಾದಕರು ಪಾಕಿಸ್ತಾನದಿಂದ ಭಾರತಕ್ಕೆ ಬರಲು ಬಳಸಿದ ನಾವೆಗಳ ಇಂಜಿನ್ ಗಳನ್ನು ಸಹ ಪತ್ತೆ ಹಚ್ಚಿ ಅವುಗಳು ಲಷ್ಕರ್ ಉಗ್ರರು ಕರಾಚಿಯಲ್ಲಿ ಖರೀದಿಸಿದ್ದರು ಎನ್ನುವುದನ್ನು ಖಚಿತಪಡಿಸಿದ್ದಾರೆ. ಈ ಸಂಬಂಧ ನಡೆದ ಹಣದ ವ್ಯವಹಾರಗಳ ಮೂಲವನ್ನು ಹುಡುಕಿದ ನಂತರ ಅದರಲ್ಲಿ ಭಾಗಿಯಾದ ವ್ಯಕ್ತಿಯನ್ನು ಸಹ ಬಂಧಿಸಲಾಗಿದೆ' ಎಂದು ಖೋಸಾ ಹೇಳಿದ್ದಾರೆ.
ಅಷ್ಟೇ ಅಲ್ಲ, ಈ ದಾಳಿಯ ಕಾರ್ಯಾಚರಣೆಗೆ ಬಳಸಿದ ಕೋಣೆಯನ್ನು ಕರಾಚಿಯಲ್ಲಿ ಗುರುತಿಸಿ ಅದನ್ನು ವಶಕ್ಕೆ ಪಡೆಯಲಾಗಿದೆ. ಮಾತ್ರವಲ್ಲ ದಾಳಿಯ ಸಮಯದಲ್ಲಿ ಉಗ್ರರೊಂದಿಗೆ ಸಂಪರ್ಕ ಸಾಧಿಸಲು ಬಳಸಿದ್ದ ಉಪಕರಣಗಳನ್ನು ಪತ್ತೆಹಚ್ಚಲಾಗಿದೆ ಎಂಬ ವಿಚಾರವನ್ನು ತಾರೀಖ್ ತಿಳಿಸಿದ್ದಾರೆ.
ಮುಂದುವರಿದು, ಮುಂಬೈ ದಾಳಿಗೆ ಕಾರಣರಾದ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಹಾಗೂ ಆತನ ಸಹವರ್ತಿಗಳನ್ನು ಬಂಧಿಸಲಾಗಿದೆ. ಅಲ್ಲದೆ ಕೃತ್ಯಕ್ಕೆ ಹಣಕಾಸಿನ ನೆರವು ನೀಡಿದ ವಿದೇಶಿ ಮೂಲದ ಕೆಲವು ವ್ಯಕ್ತಿಗಳನ್ನು ಸಹ ಬಂಧಿಸಿ ಅವರು ತನಿಖೆ ಎದುರಿಸುವಂತೆ ಮಾಡಲಾಗಿದೆ ಎಂದು ಖೋಸ ಉಲ್ಲೇಖಿಸಿದ್ದಾರೆ.
ಮುಂಬೈ ದಾಳಿ ಷಡ್ಯಂತ್ರ ಅದ್ವಿತೀಯವಾದದ್ದು ಹಾಗೂ ಕೇಸು ವಿವಿಧ ದೇಶಗಳ ವ್ಯಾಪ್ತಿಯಲ್ಲಿ ಬರುವುದರಿಂದ ಬಹಳ ಕ್ಲಿಷ್ಠಕರವಾದದ್ದು. ಇದಕ್ಕಾಗಿ ಅತ್ಯುತ್ತಮ ಮಟ್ಟದ ಪುರಾವೆಗಳು ಅಗತ್ಯ. ಆದ್ದರಿಂದ ಎರಡೂ ದೇಶಗಳ ಕಾನೂನು ತಜ್ನರುಗಳು ಒಟ್ಟಾಗಿ ಕುಳಿತು ಇದನ್ನು ಬೇಧಿಸಬೇಕೆ ಹೊರತು ಒಬ್ಬರನ್ನೊಬ್ಬರು ದೂರುತ್ತ ಕೂರಬಾರದು ಎಂದು ತಾರೀಕ್ ಅಭಿಪ್ರಾಯಪಟ್ಟಿದ್ದಾರೆ.
ಕೊನೆಯಲ್ಲಿ ತಾರೀಖ್ ಖೋಸ ಪಾಕಿಸ್ತಾನಕ್ಕೆ ಒಂದು ಮಹತ್ವದ ಪ್ರಶ್ನೆ ಕೇಳಿದ್ದಾರ - 'ಒಂದು ದೇಶವಾಗಿ ನಾವು ಅಸಹನೀಯ ಸತ್ಯವನ್ನು ಎದುರಿಸಲು ಹಾಗೂ ನಮ್ಮ ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ ಎಂಬ ಪೆಡಂಭೂತವನ್ನು ಹತ್ತಿಕ್ಕಲು ತಯಾರಿದ್ದೇವೆಯೆ?'