ಬೆಂಗಳೂರು : ಯುಗಾದಿ ಹಬ್ಬದ ಅಂಗವಾಗಿ ನಾಡಿನ ಜನತೆಗೆ ರಾಜ್ಯಪಾಲ ವಜುಭಾಯಿ ವಲಾ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಷಯ ತಿಳಿಸಿದ್ದಾರೆ.
ಮನ್ಮಥ ನಾಮ ಸಂವತ್ಸರದ ಚಂದ್ರಮಾನ ಯುಗಾದಿಯ ಶುಭ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಹೆಚ್ಚಿನ ಸುಖ, ಉತ್ತಮ ಆರೋಗ್ಯ, ಸಂಪತ್ತು ಹಾಗೂ ಅಭಿವೃದ್ಧಿಶೀಲ ಹೊಸ ವರ್ಷವನ್ನು ಹಾರೈಸುತ್ತೇನೆ ಎಂದು ರಾಜ್ಯಪಾಲರು ಶುಭ ಹಾರೈಸಿದ್ದಾರೆ.
ನೂತನ ವರ್ಷವು ಉತ್ತಮ ಮಳೆ, ಬೆಳೆಯೊಂದಿಗೆ ಎಲ್ಲ ಪ್ರಜೆಗಳಿಗೂ ಅಭಿವೃದ್ಧಿ ತರಲೆಂದು ಸರ್ವಶಕ್ತನಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
ಇನ್ನು ಸಡಗರ ಸಂಭ್ರಮದ ಯುಗಾದಿ ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ.
ಮನೆ ಮನೆಯಲ್ಲೂ ತಳಿರು ತೋರಣ. ಕಷ್ಟ ಸುಖಗಳನ್ನು ಸಮಾನತೆಯಿಂದ ಸ್ವೀಕರಿಸಬೇಕೆಂಬ ಸಂದೇಶ ಸಾರಲು ಮೆಲ್ಲಲು ಬೇವು ಬೆಲ್ಲದ ಮಿಶ್ರಣ. ವರ್ಷದಲ್ಲಿ ಅಡಗಿರುವ ಭವಿಷ್ಯ ತಿಳಿಯಲು ಬಯಸುವವರಿಗೆ ಸಾಂಪ್ರದಾಯಿಕ ಪಂಚಾಂಗ ಶ್ರವಣ. ಹಬ್ಬದೂಟಕ್ಕೆ ಹೋಳಿಗೆಯ ಹೂರಣ.ಇವು ನಮ್ಮ ಚಂದ್ರಮಾನ ಯುಗಾದಿಯ ವೈಶಿಷ್ಠ್ಯಗಳಿಗೆ ಕಾರಣ. ಚಂದ್ರಮಾನ ಯುಗಾದಿಯ ಶುಭ ಸಂದರ್ಭದಲ್ಲಿ ರಾಜ್ಯದಲ್ಲಿ ಸರ್ವರಿಗೂ ಅಭಿವೃದ್ಧಿ ಮತ್ತು ಸಮೃದ್ಧಿಯ ಸದವಕಾಶಗಳು ದೊರೆಯಲಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.