ಬೆಂಗಳೂರು : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಐ.ಎ.ಎಸ್ ಅಧಿಕಾರಿ ಡಿ.ಕೆ ರವಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಸ್ವತಃ ಸಿದ್ದರಾಮಯ್ಯ ಸಂಪುಟ ಸಚಿವರೇ ಒತ್ತಾಯಿಸುತ್ತಿದ್ದಾರೆ.
ಡಿ.ಕೆ ರವಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಅಧಿವೇಶನ ನಡೆಯುವುದಕ್ಕೂ ಬಿಡದೇ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಸಿದ್ದರಾಮಯ್ಯ ಸಂಪುಟ ಸಹೋದ್ಯೋಗಿಗಳು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದುಪಟ್ಟು ಹಿಡಿದಿದ್ದಾರೆ.
ಮಾ.19ರಂದು ಪ್ರತಿಪಕ್ಷದ ಸದಸ್ಯರು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಈ ಬೆಳವಣಿಗೆ ಕಂಡುಬಂದಿದ್ದು, ಪ್ರತಿಪಕ್ಷಗಳ ಧರಣಿ ಹೀಗೆ ಮುಂದುವರೆದರೆ ಅಧಿವೇಶನಕ್ಕೆ ಅಡ್ಡಿಯುಂಟಾಗಲಿದೆ. ಅಲ್ಲದೇ ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ ಎಂಬ ಅನುಮಾನವೂ ಬಲವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಆರೋಪದಿಂದ ಮುಕ್ತರಾಗಲು ಸಿಬಿಐ ತನಿಖೆಗೆ ಆದೇಶ ನೀಡುವುದು ಅನಿವಾರ್ಯ ಎಂದು ಸಿದ್ದರಾಮಯ್ಯ ಸಂಪುಟ ಸಹೋದ್ಯೋಗಿಗಳೇ ಸಿ.ಎಂ ಗೆ ಒತ್ತಡ ಹೇರುತ್ತಿದ್ದಾರೆ.
ರಾಜ್ಯಾದ್ಯಾಂತ ಸಿಬಿಐ ತನಿಖೆಗೆ ಒತ್ತಾಯ ಕೇಳಿಬರುತ್ತಿರುವಾಗಲೇ, ಸಿದ್ದರಾಮಯ್ಯ ಸಚಿವ ಸಂಪುಟ ಸಹೋದ್ಯೋಗಿಗಳೂ ಇದಕ್ಕೆ ದನಿಗೂಡಿಸಿರುವುದು ಅಚ್ಚರಿ ಮೂಡಿಸಿದೆ.