ನವದೆಹಲಿ : ನಾಲ್ಕು ತಿಂಗಳು ಮುಂಚಿತವಾಗಿಯೇ ರೈಲು ಟಿಕೆಟ್ ಕಾದಿರಿಸುವ ವ್ಯವಸ್ಥೆಯನ್ನು ಎ.1ರಿಂದ ಜಾರಿಗೆ ತರಲು ರೈಲ್ವೇ ಇಲಾಖೆ ಸಜ್ಜಾಗುತ್ತಿದೆ.
ಈ ಕುರಿತು ಕಳೆದ ತಿಂಗಳು ಮಂಡಿಸಿದ ಆಯವ್ಯಯದಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಪ್ರಸ್ತಾಪಿಸಿದ್ದರು. ಸದ್ಯ 60 ದಿನ ಮುಂಚಿತವಾಗಿ ಟಿಕೆಟ್ ಕಾದಿರಿಸುವ ವ್ಯವಸ್ಥೆ ಇದೆ. ಅದನ್ನು 120 ದಿನಕ್ಕೆ ಹೆಚ್ಚಿಸುವ ಸಲುವಾಗಿ ಸಾಫ್ಟ್ವೇರ್ ನಲ್ಲಿ ಬದಲಾವಣೆ ತರಲಾಗುತ್ತಿದ್ದು, ಆ ಕೆಲಸ ಮಾಸಾಂತ್ಯಕ್ಕೆ ಮುಗಿಯಲಿದೆ. ಏ.1ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಲ್ಕು ತಿಂಗಳು ಮೊದಲೇ ಟಿಕೆಟ್ ಬುಕಿಂಗ್ ಮಾಡಿಸುವ ವ್ಯವಸ್ಥೆ ಎರಡು ವರ್ಷಗಳ ಹಿಂದೆಯೂ ಇತ್ತಾದರೂ, ಅದರಿಂದ ಯಾವುದೇ ಬದಲಾವಣೆಯೂ ಆಗದು ಎಂದು ಹಿಂಪಡೆಯಲಾಗಿತ್ತು. ಆದರೆ ಇದೀಗ ಮತ್ತೂಮ್ಮೆ ಜಾರಿಗೆ ತರುತ್ತಿರುವುದರ ಹಿಂದೆ ಬೇರೆಯದೇ ಕಾರಣಗಳಿವೆ ಎಂದು ಹೆಳಲಾಗುತ್ತಿದೆ.
120 ದಿನ ಮೊದಲೇ ಬುಕಿಂಗ್ ಗೆ ಅವಕಾಶ ಮಾಡಿಕೊಟ್ಟರೆ ನಷ್ಟದಲ್ಲಿರುವ ರೈಲ್ವೆಗೆ ತುಸು ಹೆಚ್ಚುವರಿಯಾಗಿ ಆದಾಯ ಬರಲಿದೆ. ಅದೂ ಅಲ್ಲದೆ 60 ದಿನಗಳ ಕಾಲ ಬಡ್ಡಿ ರಹಿತ ಹಣ ಸಿಗುತ್ತದೆ. ಒಂದು ವೇಳೆ ಟಿಕೆಟ್ ಗಳನ್ನು ಬುಕಿಂಗ್ ಮಾಡಿಸಿದ ಬಳಿಕ ಪ್ರಯಾಣಿಕರು ರದ್ದುಪಡಿಸಿದರೂ, "ರದ್ದು ಶುಲ್ಕ'ದಿಂದಲೂ ಹೆಚ್ಚು ಆದಾಯ ಬರುತ್ತದೆ ಎಂಬ ಲೆಕ್ಕಾಚಾರವಿದೆ.
ವಿದೇಶಿ ಪ್ರವಾಸಿಗರಿಗೆ 360 ದಿನ ಮೊದಲೇ ಟಿಕೆಟ್ ಬುಕಿಂಗ್ ಮಾಡಿಸುವ ಆಯ್ಕೆ ಇದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇದೇ ವೇಳೆ, ನಿಲ್ದಾಣ ಪ್ರವೇಶಿಸಿದ ಐದು ನಿಮಿಷದೊಳಗೆ ಸಾಮಾನ್ಯ ದರ್ಜೆ ಟಿಕೆಟ್ಗಳು ಪ್ರಯಾಣಿಕರಿಗೆ ಸಿಗುವಂತೆ ಮಾಡುವುದಾಗಿ ಬಜೆಟ್ ನಲ್ಲಿ ಸುರೇಶ್ ಪ್ರಭು ಪ್ರಕಟಿಸಿದ್ದರು. ಆ ವ್ಯವಸ್ಥೆಗಳನ್ನೂ ಜಾರಿಗೆ ತರುವ ಪ್ರಯತ್ನ ಆರಂಭವಾಗಿವೆ.
ರೈಲ್ವೇ ಬಜೆಟ್ನಲ್ಲಿ ಕೇಂದ್ರ ಸರಕಾರ ಈ ಬಾರಿ ಪ್ರಯಾಣ ದರವನ್ನು ಏರಿಸದೇ ಸಮಾಧಾನ ತಂದರೂ, ಇದೀಗ ಪ್ಲಾಟ್ ಫಾರಂ ಟಿಕೆಟ್ ದರ ಏರಿಸಿ ಗುದ್ದು ಕೊಟ್ಟಿದೆ. 5 ರೂ. ಇದ್ದ ಪ್ಲಾಟ್ ಫಾರಂ ದರವನ್ನು 10 ರೂ.ಗೆ ಏರಿಸಲಾಗಿದ್ದು, ಏಪ್ರಿಲ್ 1ರಿಂದ ಅನ್ವಯವಾಗಲಿದೆ ಎಂದು ರೈಲ್ವೇ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಇದರೊಂದಿಗೆ ಯಾವುದೇ ಮೇಳ, ಅಥವಾ ರ್ಯಾಲಿ ಸಂದರ್ಭಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ರೈಲ್ವೇ ವಿಭಾಗಾಧಿಕಾರಿಗಳಿಗೆ ಪ್ಲಾಟ್ ಫಾರಂ ಟಿಕೆಟ್ ದರವನ್ನು ಏರಿಸುವ ಅಧಿಕಾರವನ್ನೂ ಕೊಡಲಾಗಿದೆ. ಪ್ರಯಾಣಿಕರ ಹೊರತಾಗಿ ಪ್ಲಾಟ್ ಫಾರಂನಲ್ಲಿ ವಿಪರೀತ ಜನದಟ್ಟಣೆಯಾಗುತ್ತಿದ್ದು, ಪ್ರಯಾಣಿಕರಿಗೆ ತೊಂದರೆಯಾಗಿದೆ. ಆ ಕಾರಣ ಈ ಕ್ರಮ ಜರುಗಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ರೈಲ್ವೇ ಸಚಿವಾಲಯದ ಈ ಕ್ರಮ ಗ್ರಾಹಕರಿಗೆ ದುಬಾರಿಯಾಗಲಿದೆ.