ಬೆಂಗಳೂರು : ಪ್ರಾಮಾಣಿಕ, ದಕ್ಷ ಐ.ಎ.ಎಸ್ ಅಧಿಕಾರಿ ಡಿ.ಕೆ ರವಿ ಅವರ ಅನುಮಾನಾಸ್ಪದ ಸಾವಿಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೋಲಾರ ಹಾಗೂ ರವಿ ಅವರ ತವರು ಜಿಲ್ಲೆ ತುಮಕೂರಿನಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು, ಆಕ್ರೋಶಗೊಂಡ ಜನತೆ ಸಿ.ಎಂ ಸಿದ್ದರಾಮಯ್ಯ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಹಾಗೆಯೇ ಕೋಲಾರದಲ್ಲೂ ರವಿ ಸಾವಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬೈರೇಗೌಡ ನಗರದಲ್ಲಿರುವ ಕೋಲಾರ ಶಾಸಕ ವರ್ತೂರು ಪ್ರಕಾಶ್ ನಿವಾಸದ ಮುಂದಿದ್ದ ಪ್ರಕಾಶ್ ಅವರ ಕಟೌಟ್ ಅನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಡಿ.ಕೆ ರವಿ ಅವರು ಕೋಲಾರದ ಜನತೆ ಪಾಲಿಗೆ ನೆಚ್ಚಿನ ಜಿಲ್ಲಾಧಿಕಾರಿಯಾಗಿದ್ದರು. ಅವರ ನಿಗೂಢ ಸಾವಿಗೆ ರಾಜ್ಯಾದ್ಯಂತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಈ ಕೂಡಲೇ ಸಿಬಿಐ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ಇದೇ ವೇಳೆ ಖಾಸಗಿ ಮಾಧ್ಯಮವೊಂದರ ವರದಿ ಮೂಲಕ, ವಾಣಿಜ್ಯ ತೆರಿಗೆ ಆಯುಕ್ತರಾಗಿದ್ದ ಡಿ.ಕೆ ರವಿ ಅವರ ಮೇಲೆ ರಾಜ್ಯ ಸರ್ಕಾರದ ಹಿರಿಯ ಸಚಿವರೇ ಒತ್ತಡ ಹಾಕುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಹಿರಿಯ ಸಚಿವರ ಸಂಬಂಧಿಕರಿಗೆ ಸೇರಿದ ಬಿಲ್ಡರ್ ಕಂಪನಿ ಕೋಟ್ಯಂಟರ ರೂ ತೆರಿಗೆ ಪಾವತಿ ಮಾಡಬೇಕಿತ್ತು. ಆದರೆ ತೆರಿಗೆಯನ್ನು ವಸೂಲಿ ಮಾಡದಂತೆ ಸಚಿವರು ಡಿ.ಕೆ ರವಿ ಅವರ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಲಾಗಿದೆ.