ನವದೆಹಲಿ : ಎನ್.ಡಿ.ಎ ಸರ್ಕಾರದ ಪ್ರಮುಖ ಚುನಾವಣಾ ಭರವಸೆಗಳ ಪೈಕಿ ಒಂದಾದ ಸ್ಮಾರ್ಟ್ ಸಿಟಿ ಯೋಜನೆಗೆ ಏಪ್ರಿಲ್ ತಿಂಗಳಲ್ಲಿ ಚಾಲನೆ ಸಿಗಲಿದೆ ಎಂದು ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ವೆಂಕಯ್ಯನಾಯ್ಡು ಸುಳಿವು ನೀಡಿದ್ದಾರೆ.
ಯೋಜನೆ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಯೋಜನೆ ಜಾರಿಗೆ ಬೇಕಾದ ಎಲ್ಲ ಅಗತ್ಯ ಅನುಮತಿಗಳನ್ನು ಮಾರ್ಚ್ ತಿಂಗಳ ಅಂತ್ಯಕ್ಕೆ ಪಡೆದುಕೊಳ್ಳಲಾಗುವುದು. ಬಹುತೇಕ ಮುಂದಿನ ತಿಂಗಳು ಯೋಜನೆಗೆ ಚಾಲನೆ ಸಿಗಲಿದೆ ಎಂದು ಸ್ಮಾರ್ಟ್ ಸಿಟಿ ಕುರಿತ ಕಾರ್ಯಾಗಾರವೊಂದರಲ್ಲಿ ತಿಳಿಸಿದ್ದಾರೆ.
ಸ್ಮಾಟ್ ಸಿಟಿ ಯೋಜನೆ ಸದ್ಯಕ್ಕೆ ಇಡೀ ವಿಶ್ವದಲ್ಲಿಯೇ ಸಂಚಲನ ಸೃಷ್ಟಿಸಿರುವ ವಿಷಯವಾಗಿದೆ. ಭಾರೀ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರಗಳ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಸ್ಮಾರ್ಟ್ ಸಿಟಿಗಳ ಆಯ್ಕೆಯು ಪೂರ್ಣವಾಗಿ ಸರ್ಕಾರ ರೂಪಿಸಿರುವ ನಿಯಮಗಳ ಅನ್ವಯ ನಡೆಯುತ್ತದೆಯೇ ಹೊರತೂ, ಯಾವುದೇ ರಾಜಕೀಯ ಸೇರಿದಂತೆ ಇತರೆ ಯಾವುದೇ ಹಿತಾಸಕ್ತಿಗಳನ್ನು ಒಳಗೊಂಡಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸ್ಮಾರ್ಟ್ ಸಿಟಿಗಳು ಆರ್ಥಿಕತೆಯ ಎಂಜಿನ್ ಗಳಾಗಿ ಕೆಲಸ ಮಾಡಲಿದ್ದು, ಟೂರಿಸಂ ಸಿಟಿ, ಹೆಲ್ತ್ ಕೇರ್ ಸಿಟಿ, ಎಜುಕೇಷನ್ ಸಿಟಿ, ಪೋರ್ಟ್ಸಿಟಿ ರೀತಿಯಲ್ಲಿ ತಲೆ ಎತ್ತಲಿವೆ ಎಂದು ನಾಯ್ಡು ತಿಳಿಸಿದ್ದಾರೆ.