ಬೆಂಗಳೂರು : ಕಾಂಗ್ರೆಸ್ ಪಕ್ಷದ ಚಟುವಟಿಕೆಗಳ ಬಗ್ಗೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳನಿರ್ಲಕ್ಷ್ಯದ ಬಗೆಗಿನ ದೂರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಂಡಿದ್ದು, ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ಕೆಪಿಸಿಸಿ ಕಚೇರಿಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ತಮ್ಮ ಸಂಪುಟದ ಎಲ್ಲಾ ಸಚಿವರಿಗೆ ಪತ್ರ ಬರೆದಿರುವ ಅವರು, ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಪಕ್ಷ ಹಾಗೂ ಸರ್ಕಾರದ ನಡುವೆ ಉತ್ತಮ ಸೌಹಾರ್ದ ಬೆಳೆಯುವಂತೆ ನೋಡಿ ಕೊಳ್ಳಬೇಕು ಎಂದು ಕೋರಿದ್ದಾರೆ.
ಅಲ್ಲದೆ, ಉಸ್ತುವಾರಿ ಸಚಿವರು ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿದಾಗ ಕಡ್ಡಾಯವಾಗಿ ಡಿಸಿಸಿ ಕಚೇರಿಗಳಿಗೂ ಭೇಟಿ ನೀಡಬೇಕು ಎಂದು ಅವರು ನಿರ್ದೇಶಿಸಿದ್ದಾರೆ.
ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರ ಅಹವಾಲು ಆಲಿಸುವ ಕುರಿತು ಈ ಹಿಂದೆ ರಾಜ್ಯ ಉಸ್ತುವಾರಿ ದಿಗ್ವಿಜಯಸಿಂಗ್ ಅವರು ಎಲ್ಲಾ ಸಚಿವರಿಗೆ ಪತ್ರ ಬರೆದಿದ್ದನ್ನು ನೆನಪಿಸಿರುವ ಅವರು, ರಾಜ್ಯ ಉಸ್ತುವಾರಿಯವರ ಸೂಚನೆಯಂತೆ ಪಕ್ಷದ ಕಚೇರಿಗೆ ಭೇಟಿ ನೀಡುವಿರೆಂದು ಆಶಿಸುವುದಾಗಿ ತಿಳಿಸಿದ್ದಾರೆ.
ಕೆಪಿಸಿಸಿಯು ಕಾರ್ಯಕರ್ತರ ಅಹವಾಲು ಸ್ವೀಕರಿಸಲು ತಿಂಗಳಿಗೆ ಒಂದು ದಿನ ಕೆಪಿಸಿಸಿ ಕಚೇರಿಗೆ ಆಗಮಿಸುವಂತೆ ಎಲ್ಲಾ ಸಚಿವರನ್ನು ಕೋರಿತ್ತು. ಈ ಬಗ್ಗೆ ವೇಳಾಪಟ್ಟಿಯೊಂದನ್ನು ಸಿದ್ಧಪಡಿಸಿ ನೀಡಿತ್ತು. ಆದರೆ, ಈ ಕೋರಿಕೆಗೆ ಬಹುತೇಕ ಸಚಿವರು ಸ್ಪಂದಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಗರಕ್ಕೆ ಆಗಮಿಸಿ ಸಮನ್ವಯ ಸಮಿತಿ ಸಭೆ ನಡೆಸಿದ್ದ ರಾಜ್ಯ ಉಸ್ತುವಾರಿ ದಿಗ್ವಿಜಯಸಿಂಗ್ ಅವರು ಸಚಿವರು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಹಾಜರಾತಿ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ತಮ್ಮೊಂದಿಗೆ ಒಯ್ದು ಹೈಕಮಾಂಡ್ ನ ನಾಯಕರೊಂದಿಗೆ ಚರ್ಚಿಸಿದ್ದರು. ಇದಾದ ನಂತರ ದಿಗ್ವಿಜಯಸಿಂಗ್ ಅವರು ಕಳೆದ ಎರಡು ದಿನಗಳ ಹಿಂದೆ ರಾಜ್ಯದ ಎಲ್ಲಾ ಸಚಿವರಿಗೂ ಪತ್ರವೊಂದನ್ನು ಬರೆದಿದ್ದು, ಕೆಪಿಸಿಸಿ ಕಚೇರಿಗೆ ಭೇಟಿ ನೀಡದ ಸಚಿವರನ್ನು ತರಾಟೆ ತೆಗೆದುಕೊಂಡಿದ್ದರು.
ಪಕ್ಷದ ಕಾರ್ಯಕರ್ತರ ಅಹವಾಲು ಕೇಳದಷ್ಟು ನಿಮಗೆ ವ್ಯವಧಾನವಿಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಇನ್ನು ಮುಂದೆ ಕಡ್ಡಾಯವಾಗಿ ತಿಂಗಳಿಗೆ ಒಮ್ಮೆ ಕೆಪಿಸಿಸಿ ಕಚೇರಿಗೆ ಭೇಟಿ ನೀಡಬೇಕು ಎಂದು ತಾಕೀತು ಮಾಡಿದ್ದರು. ಅಲ್ಲದೆ, ರಾಜ್ಯದ ಎಲ್ಲ ಸಚಿವರಿಗೆ ಈ ರೀತಿ ಪತ್ರ ಬರೆದ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಸಚಿವರಿಗೂ ಪತ್ರ ಬರೆದು ರಾಜ್ಯ ಉಸ್ತುವಾರಿಗಳ ಸೂಚನೆ ಪಾಲಿಸುವಂತೆ ನಿರ್ದೇಶನ ಮಾಡಿದ್ದಾರೆ.