ನವದೆಹಲಿ : ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಪಕ್ಷದ ಹಿರಿಯ ಸ್ಥಾಪಕ ಸದಸ್ಯರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರನ್ನು ಹೊರ ಹಾಕುವುದನ್ನು ವಿರೋಧಿಸಿ ಇದೀಗ ಆನ್ ಲೈನ್ ಸಹಿ ಸಂಗ್ರಹ ಅಭಿಯಾನ ಭರದಿಂದ ಸಾಗುತ್ತಿದ್ದು ಕನಿಷ್ಠ 10,000 ಸಹಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ.
ಆಮ್ ಆದ್ಮಿ ಪಕ್ಷವು ಪಿಎಸಿಯಿಂದ ಅಥವಾ ಕೇವಲ ಕೇಜ್ರಿವಾಲ್ ಅವರಿಂದ ಆದುದಲ್ಲ; ಬದಲಾಗಿ ಅದು ಸಹಸ್ರಾರು ಕಾರ್ಯಕರ್ತರ ಪರಿಶ್ರಮದ ಫಲವಾಗಿ ಅಸ್ತಿತ್ವಕ್ಕೆ ಬಂದಿರುವ ಪಕ್ಷವಾಗಿದೆ. ಆಮ್ ಆದ್ಮಿ ಪಕ್ಷ ಎಂಬ ಪರಿಕಲ್ಪನೆ ಕೇವಲ ಒಬ್ಬ ವ್ಯಕ್ತಿ ಅಥವಾ ಕೆಲವೇ ಕೆಲವು ವ್ಯಕ್ತಿಗಳ ಉತ್ಪನ್ನವಲ್ಲ. ಅದೊಂದು ಮಹಾನ್ ಸಮೂಹ ಚಿಂತನೆಯ ಫಲವಾಗಿದೆ ಎಂದು ಆಪ್ ನಾಯಕರು, ಕಾರ್ಯಕರ್ತರು ಹೇಳಿದ್ದಾರೆ.
ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರು ಪಿಎಸಿಯಿಂದ ಯಾವ ಕಾರಣಕ್ಕೆ ಹೊರ ಹಾಕಲಾಯಿತು ಮತ್ತು ಅಂತಹ ಕಾರಣಗಳಿಗೆ ಇರುವ ಸಾಕ್ಷ್ಯ, ದಾಖಲೆ ಪತ್ರ, ವಿಡಿಯೋ ಇತ್ಯಾದಿಗಳನ್ನು ಪಿಎಸಿ ಮತ್ತು ಕೇಜ್ರಿವಾಲ್ ಬಹಿರಂಗಪಡಿಸಿ ತಮ್ಮ ಸತ್ಯ ಸಂಧತೆಯನ್ನು ಜಾಹೀರು ಪಡಿಸಬೇಕು ಎಂದು ಕೋರುವ ಮನವಿಯನ್ನು ಆನ್ ಲೈನ್ನಲ್ಲಿ (change.org) ಹಾಕಲಾಗಿದೆ. ಇದಕ್ಕೆ 24 ತಾಸುಗಳ ಒಳಗೆ 2,000ಕ್ಕೂ ಅಧಿಕ ಆಪ್ ಬೆಂಬಲಿಗರು ಸಹಿ ಹಾಕಿದ್ದಾರೆ.
ಕಳೆದ ಲೋಕಸಭಾ ಚುನಾವಣೆಗಳ ಬಳಿಕ ಆಪ್ ಸಂಪೂರ್ಣವಾಗಿ ಕಳೆಗುಂದಿತ್ತು. ಪಕ್ಷದ ಸದಸ್ಯರಲ್ಲಿ ಮತ್ತು ಬೆಂಬಲಿಗರಲ್ಲಿ ಆಪ್ ಸೋಲು ನಿರಾಶೆಯನ್ನು ಹುಟ್ಟುಹಾಕಿತ್ತು. ಆದರೂ ಅದನ್ನು ಮೆಟ್ಟಿ ನಿಂತು ಪ್ರಾಮಾಣಿಕವಾಗಿ ಪಕ್ಷದ ಏಳಿಗೆಗೆ ಸಹಸ್ರಾರು ಕಾರ್ಯಕರ್ತರು ಶ್ರಮಿಸಿ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅಭೂತಪೂರ್ವ ಗೆಲವು ತಂದುಕೊಟ್ಟರು. ಈ ವಿಜಯವು ಪಕ್ಷದ ಪಿಎಸಿ ಸದಸ್ಯರಿಂದಾಗಲೀ ಅರವಿಂದ ಕೇಜ್ರಿವಾಲರಿಂದಾಗಲೀ ಬಂದುದಲ್ಲ ಎಂದು ಆಪ್ ಕಾರ್ಯಕರ್ತರು ಹೇಳಿದ್ದಾರೆ.