ಬೆಂಗಳೂರು : ವಿವಾದದ ನಡುವೆಯೇ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಓಂ ಪ್ರಕಾಶ್ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ನಿರೀಕ್ಷೆಯಂತೆ ಡಿಜಿಪಿ ಸ್ಥಾನಕ್ಕೆ ಓಂ ಪ್ರಕಾಶ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಓಂ ಪ್ರಕಾಶ್ ಅವರು ನಿರ್ಗಮಿತ ಡಿಜಿಪಿ ಲಾಲ್ ರುಕುಮೋ ಪಚಾವ್ ಅವರಿಂದ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಓಂಪ್ರಕಾಶ್, ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆ ನಿಗ್ರಹ, ಮಹಿಳೆಯರು ಮತ್ತು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ ತಡೆ, ಅಪರಾಧ ಪ್ರಕರಣಗಳ ನಿಯಂತ್ರಣದೊಂದಿಗೆ ಕಾನೂನು ಸುವ್ಯವಸ್ಥೆ ಪಾಲನೆಗೆ ಒತ್ತು ನೀಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ನಿರ್ಗಮಿತ ಡಿಜಿಪಿ ಲಾಲ್ ರುಕುಮೋ ಪಚಾವೋ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅವಧಿ ತಮಗೆ ಸಂತಸ ತಂದಿದೆ ಎಂದರು.
ಬಿಹಾರ ಮೂಲದ ಓಂ ಪ್ರಕಾಶ್, ಬನಾರಸ್ ಹಿಂದೂ ವಿವಿಯಲ್ಲಿ ಎಂಎಸ್ಸಿ ಪದವಿ ಪಡೆದು 1981ರಲ್ಲಿ ಐಪಿಎಸ್ ತೇರ್ಗಡೆಯಾಗಿ ಕರ್ನಾಟಕ ಕೇಡರ್ ಅಧಿಕಾರಿಯಾಗಿ ನೇಮಕಗೊಂಡರು. ಚಿಕ್ಕ ಮಗಳೂರು, ಶಿವಮೊಗ್ಗ, ಕಾರವಾರದಲ್ಲಿ ಎಸ್ಪಿಯಾಗಿ ಕೆಲಸ ಮಾಡಿ 1995ರಲ್ಲಿ ಡಿಐಜಿ ಹುದ್ದೆಗೆ ಬಡ್ತಿ ಪಡೆದರು. ನಂತರ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. 2001ರಲ್ಲಿ ಐಜಿಪಿಯಾಗಿ ಬಡ್ತಿ ಪಡೆದು ಸಾರಿಗೆ ಆಯುಕ್ತ, ಕೆಪಿಎ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 2009ರಲ್ಲಿ ಎಡಿಜಿಪಿಯಾದ ಅವರು ಅಪರಾಧ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡಿದ್ದರು. 2012ರ ಮೇ 31ರಿಂದ ಅಗ್ನಿ ಶಾಮಕ ದಳದ ಡಿಜಿಪಿಯಾಗಿ ಕೆಲಸ ಮಾಡುತ್ತಿದ್ದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಸ್ಥಾನಕ್ಕೆ ಆರ್.ಕೆ.ದತ್ತಾ ನೇಮಕಕ್ಕೆ ಈ ಹಿಂದೆ ಸರ್ಕಾರ ಒಲವು ತೋರಿತ್ತು. ಆದರೆ, ಅವರ ವಿರುದ್ಧ ದೂರು ಇದ್ದ ಕಾರಣ ಪ್ರಸ್ತಾವನೆ ಕೈ ಬಿಡಲಾಗಿತ್ತು. ಸುಶಾಂತ್ ಮಹಾಪಾತ್ರ ಅವರಿಗೆ ದತ್ತಾ ನಂತರದ ಹಿರಿತನ ಇತ್ತಾದರೂ ಸರ್ಕಾರ ಅವರ ಹೆಸರನ್ನು ಈ ಹುದ್ದೆಗೆ ಪರಿಗಣಿಸಲಿಲ್ಲ. ಗೃಹ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ಶುಕ್ರವಾರ ಸಭೆ ನಡೆಸಿ, ಡಿಜಿಪಿ ಸ್ಥಾನಕ್ಕೆ ಆರ್.ಕೆ.ದತ್ತಾ, ಸುಶಾಂತ್ ಮಹಾ ಪಾತ್ರ, ಓಂ ಪ್ರಕಾಶ್ ಹಾಗೂ ಬಿಪಿನ್ ಗೋಪಾಲಕೃಷ್ಣ ಅವರ ಹೆಸರನ್ನು ಶಿಫಾರಸ್ಸು ಮಾಡಿತ್ತು. ಸಿಎಂ ಅವರು ಓಂ ಪ್ರಕಾಶ್ ಹೆಸರನ್ನು ಆಯ್ಕೆ ಮಾಡಿದರು. ಶಿಫಾರಸ್ಸು ನೀಡುವ ಸಂದರ್ಭದಲ್ಲಿ ಸೇವಾ ಹಿರಿತನವನ್ನು ಪರಿಗಣಿಸಲಾಗಿಲ್ಲ ಎಂಬುದು ಮಹಾಪಾತ್ರ ಆರೋಪ.
ಡಿಜಿಪಿ ನೇಮಕಕ್ಕೆ ಸಂಬಂಧಿಸಿದಂತೆ ಸುಶಾಂತ್ ಮಹಾಪಾತ್ರ ಹೇಳಿಕೆ ಬಗ್ಗೆ ನಾನೇನು ಕಾಮೆಂಟ್ ಮಾಡುವುದಿಲ್ಲ. ಆ ವಿಚಾರದಲ್ಲಿ ಮಾತನಾಡುವ ಅರ್ಹತೆಯೂ ನನಗಿಲ್ಲ. ನನ್ನ ವಿರುದ್ಧ ಕೇಳಿ ಬಂದಿರುವ ಅಧಿಕಾರದ ದುರುಪಯೋಗ ಆರೋಪದ ಬಗ್ಗೆ ಯಾವುದೇ ತನಿಖೆ ಎದುರಿಸಲು ನಾನು ಸಿದ್ಧ ಎಂದು ನೂತನ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ತಿಳಿಸಿದ್ದಾರೆ.