ನವದೆಹಲಿ : ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕ್ಷಮೆಯಾಚಿಸುವಂತೆ ವಿರೋಧಪಕ್ಷಗಳು ಪಟ್ಟು ಹಿಡಿದಿದ್ದು, ಕ್ಷಮೆ ಯಾಚಿಸದೇ ಇದ್ದರೆ ರೈಲ್ವೆ ಬಜೆಟ್ ಮಂಡನೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿವೆ.
ವಿರೋಧ ಪಕ್ಷಗಳು ಸದನ ಹಾಳುಮಾಡುವ ಮನಸ್ಥಿತಿಯನ್ನು ಹೊಂದಿವೆ ಎಂದು ವೆಂಕಯ್ಯ ನಾಯ್ಡು ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ಆಕ್ರೋಶಗೊಂಡಿರುವ ವಿಪಕ್ಷಗಳು ವೆಂಕಯ್ಯ ನಾಯ್ಡು ಕ್ಷಮೆಯಾಚಿಸಬೇಕು ಇಲ್ಲದೇ ಇದ್ದರೆ ರೈಲ್ವೆ ಬಜೆಟ್ ಮಂಡನೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪೀಕರ್ ಗೆ ಬರೆದಿರುವ ಪತ್ರದಲ್ಲಿ ಎಚ್ಚರಿಕೆ ನೀಡಿವೆ.
ಕಲಾಪ ಆರಂಭಕ್ಕೂ ಮುನ್ನ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಪಕ್ಷ ನಾಯಕರು ಸಭೆ ನಡೆಸಿದರು. ಸಭೆಯಲ್ಲಿ ಟಿಎಂಸಿ, ಎಸ್ ಪಿ ಹಾಗೂ ಬಿಎಸ್ ಪಿ ನಾಯಕರು ಭಾಗವಹಿಸಿದ್ದರು.
ಕಲಾಪ ಆರಂಭ ವಾಗುತ್ತಿದ್ದಂತೆಯೇ ವಿಪಕ್ಷಗಳು, ಸಚಿವರು ಕ್ಷಮೆಯಾಚಿಸುವಂತೆ ಒತ್ತಾಯಿಸಿ ಸದನದ ಬಾವಿಗಿಳಿದು ಗದ್ದಲ ಆರಂಭಿಸಿದರು. ವಿಪಕ್ಷಗಳ ಕೋಲಾಹಲದಿಂದಾಗಿ ಸ್ಪೀಕರ್ ಸುಮಿತ್ರಾ ಮಜಹಾಜನ್ ಲೋಕಸಭಾ ಕಲಾಪವನ್ನು ಅರ್ಧಗಂಟೆ ಮುಂದೂಡಿದ ಘಟನೆಯೂ ನಡೆಯಿತು.
ಮತ್ತೆ ಕಲಾಪ ಆರಂಭವಾದಾಗ ವಿರೋಧಪಕ್ಷಗಳ ಗದ್ದಲಕ್ಕೆ ಪ್ರತಿಕ್ರಿಯಿಸಿರುವ ವೆಂಕಯ್ಯ ನಾಯ್ಡು, ಯಾರನ್ನೂ ನೋಯಿಸುವ ಉದ್ದೇಶದಿಂದ ಹೇಳಿಕೆ ನೀಡಿಲ್ಲ. ವಿಪಕ್ಷಗಳ ಬಗ್ಗೆ ಅಪಾರ ಗೌರವ ಇದೆ ಎಂದು ತಿಳಿಸಿದ್ದಾರೆ. ಆದಾಗ್ಯೂ ಕ್ಷಮೆ ಯಾಚಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ರಜೆಯ ಬಗ್ಗೆ ವ್ಯಂಗ್ಯವಾಡಿರುವ ನಾಯ್ಡು, ಕಾಂಗ್ರೆಸ್ ನೆಲಕಚ್ಚಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ, ಒಂದು ವೇಳೆ ಇಲ್ಲಿ ಆಗದಿದ್ದರೆ ಬೇರೆಡೆಗೆ ತೆರಳಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.