ನವದೆಹಲಿ : ಸಂಸತ್ ನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ವಾಗ್ದಾಳಿಗೆ ವಿಪಕ್ಷಗಳು ಸಜ್ಜಾಗಿವೆ.
ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ 6 ಕಾನೂನುಗಳಿಗೆ ವಿಧೇಯಕದ ರೂಪ ನೀಡುವ ಸವಾಲು ಸಹ ಸರ್ಕಾರದ ಮುಂದಿದೆ.
ವಿವಾದಾಸ್ಪದ ಘರ್ ವಾಪಸಿ, ಸಂಘ ಪರಿವಾರ ಮತ್ತು ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗಳು, ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ, ಸುಗ್ರೀವಾಜ್ಞೆಗಳ ಹಾವಳಿ ಸೇರಿದಂತೆ ನಾನಾ ವಿಷಯಗಳು ಅಧಿವೇಶನದಲ್ಲಿ ಪ್ರಸ್ತಾಪವಾಗುವ ನಿರೀಕ್ಷೆ ಇದ್ದು, ಕಲಾಪ ಕಾವೇರುವ ಎಲ್ಲ ಸಾಧ್ಯತೆಗಳೂ ಇವೆ.
ಈ ಮಧ್ಯೆ, ಕಲಾಪ ಸುಗಮಗೊಳಿಸುವ ನಿಟ್ಟಿನಲ್ಲಿ ಸರ್ವಪಕ್ಷಗಳ ಸಭೆಯನ್ನು ಭಾನುವಾರ ನಡೆಸಲಾಯಿತು. ದೇಶದ ಜನತೆ ಬಜೆಟ್ ಅಧಿವೇಶನದ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದಾರೆ. ಹೀಗಾಗಿ ಕಲಾಪ ಯಶಸ್ವಿಯಾಗಲು ಪ್ರತಿಪಕ್ಷಗಳು ಸಹಕರಿಸಬೇಕು. ಇದು ಎಲ್ಲ ಸಂಸದರ ಜವಾಬ್ದಾರಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಅರ್ಥಪೂರ್ಣ ಚರ್ಚೆ ನಡೆಸೋಣ. ಪಕ್ಷಭೇದ ಮರೆತು, ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಹುಡುಕೋಣ ಎಂದು ತಿಳಿಸಿದ್ದಾರೆ.
ಸರ್ಕಾರ ಹೊರಡಿಸಿದ್ದ 6 ಸುಗ್ರೀವಾಜ್ಞೆಗಳ ಕಾಲಾವಧಿ ಮಾರ್ಚ್ಗೆ ಮುಗಿಯಲಿದ್ದು, ಅವುಗಳಿಗೆ ವಿಧೇಯಕದ ರೂಪ ನೀಡುವ ಅನಿವಾರ್ಯತೆ ಸರಕಾರದ ಮುಂದಿದೆ. ಇದಕ್ಕೆ ಸಂಸತ್ತಿನ ಅನುಮೋದನೆ ಅಗತ್ಯ. ಲೋಕಸಭೆಯಲ್ಲಿ ವಿಧೇಯಕಗಳಿಗೆ ಅನುಮೋದನೆ ಸಿಕ್ಕಿದರೂ ರಾಜ್ಯಸಭೆಯಲ್ಲಿ ತಡೆ ಇದ್ದೇ ಇದೆ. ಏಕೆಂದರೆ, ಪ್ರತಿಪಕ್ಷಗಳಿಗೆ ರಾಜ್ಯಸಭೆಯಲ್ಲಿ ಬಹುಮತವಿದೆ.
ಇನ್ನು ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರಕಾರದ ಮೇಲೆ ಭಾರಿ ಒತ್ತಡವಿದ್ದು, ಈ ವಿಷಯದಲ್ಲಿ ವಿಪಕ್ಷಗಳ ವಿರೋಧ ಒಂದು ಕಡೆಯಾದರೆ, ತಿದ್ದುಪಡಿ ವಿರೋಧಿಸಿ ಅಣ್ಣಾ ಹಜಾರೆ ಆಯೋಜಿಸಿರುವ ರ್ಯಾಲಿಯ ಕಾವು ಇನ್ನೊಂದೆಡೆ. ಇದೆಲ್ಲವೂ ಅಧಿವೇಶನದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ಫೆ.20ರಿಂದ ಮೇ 8ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಮೊದಲ ಹಂತ ಫೆಬ್ರವರಿ 20ರಿಂದ ಮಾರ್ಚ್ 20ರವರೆಗೆ ನಡೆಯಲಿದೆ. ನಂತರ ಅಧಿವೇಶನಕ್ಕೆ ಒಂದು ತಿಂಗಳ ವಿರಾಮ ಇರಲಿದೆ. ಎರಡನೇ ಹಂತದ ಅಧಿವೇಶನವು ಏಪ್ರಿಲ್ 20ರಿಂದ ಮೇ.8ರವರೆಗೆ ನಡೆಯಲಿದೆ. ಅಧಿವೇಶನದಲ್ಲಿ ಸುಮಾರು 44 ವಿಧೇಯಕ ಮಂಡಿಸಲು ಸರ್ಕಾರ ಸಜ್ಜಾಗುತ್ತಿದೆ.