ನವದೆಹಲಿ : ಲಷ್ಕರ್-ಎ-ತೊಯಿಬಾ ಉಗ್ರರು ಸಮುದ್ರ ಮಾರ್ಗದ ಮೂಲಕ ಭಾರತೀಯ ಕರಾವಳಿ ಪ್ರವೇಶಿಸಲು ಸಿದ್ಧತೆ ನಡೆಸಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ.
ಈ ನಿಟ್ಟಿನಲ್ಲಿ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಉಗ್ರರು ಈ ಬಾರಿ ಭಾರತೀಯ ಯುದ್ಧನೌಕೆ ಸೇರಿದಂತೆ ನೌಕಾಪಡೆಯ ಸ್ವತ್ತುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಕರಾವಳಿಯಲ್ಲಿ ಸಕ್ರಿಯವಾಗಿರುವ ಕರಾಚಿಯ ಲಷ್ಕರ್-ಎ-ತೊಯಿಬಾ, ನೌಕಾಪಡೆ ವಿಭಾಗ ಭಾರತದ ಮೇಲೆ ದಾಳಿಗೆ ಸಂಚು ರೂಪಿಸುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಅಲ್ಲದೆ ಎಲ್ಇಟಿ ಈ ದಾಳಿಗೆ ಪಾಕಿಸ್ತಾನದ ನೌಕಾಪಡೆಯ ಸಹಾಯ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಡಿಸೆಂಬರ್ 31ರಂದು ಮಧ್ಯರಾತ್ರಿ ಪಾಕಿಸ್ತಾನದಿಂದ ಹೊರಟ ಬೋಟೊಂದು ಗುಜರಾತ್ ಬಳಿ ಭಾರತದ ಕರಾವಳಿಯಲ್ಲಿ ಸ್ಫೋಟಗೊಂಡಿತ್ತು. ಈಗ ಮತ್ತೊಂದು ಯತ್ನಕ್ಕೆ ಮುಂದಾಗಿರುವ ಉಗ್ರರು ಸಮುದ್ರ ಮಾರ್ಗದ ಮೂಲಕ ಭಾರತದೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದಾರೆ.