ಕೇರಳ : 'ತಿರುವನಂತಪುರಂ' ನ ಅನಂತಪದ್ಮನಾಭ ಸ್ವಾಮಿ ದೇವಾಲಯ ಮತ್ತೆ ಸುದ್ದಿಯಲ್ಲಿದೆ. ಅಪಾರ ಚಿನ್ನಾಭರಣಗಳಿಂದಲೇ ದೇಶಾದ್ಯಂತ ಸುದ್ದಿಯಲ್ಲಿದ್ದ ದೇವಾಲಯದಲ್ಲಿ ಈಗ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಬರೊಬ್ಬರಿ 266 ಕೆ.ಕೆ ಚಿನ್ನಾಭರಣಗಳು ನಾಪತ್ತೆಯಾಗಿದೆ ಎಂದು ಕೇಂದ್ರದ ಮಾಜಿ ಆಡಿಟರ್ ಜನರಲ್ ವಿನೋದ್ ರಾಯ್ ಸುಪ್ರೀಮ್ ಕೋರ್ಟ್ ಗೆ ತಿಳಿಸಿದ್ದಾರೆ. ದೇವಾಲಯದ ಆಸ್ತಿ-ಪಾಸ್ತಿಯನ್ನು ಆಡಿಟ್ ಮಾಡಲು ಸುಪ್ರೀಂ ಕೋರ್ಟ್ ವಿನೋದ್ ರಾಯ್ ಅವರನ್ನು ನೇಮಿಸಿತ್ತು. ಈಗ ವಿನೋದ್ ರಾಯ್ ಅವರು ಸಲ್ಲಿಸಿರುವ 1800 ಪುಟದ ವರದಿಯಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ.
ದೇವಸ್ಥಾನಕ್ಕೆ ಚಿನ್ನದ ಲೇಪನದ ಕೆಲಸದಲ್ಲಿ ಅವ್ಯವಹಾರ ನಡೆದಿರುವ ಸಾಧ್ಯತೆಗಳಿವೆ. ಚಿನ್ನದ ಲೇಪನ ಕೆಲಸಕ್ಕಾಗಿ ದೇವಾಲಯದ ದಾಸ್ತಾನಿನಿಂದ 893.44 ಕೆಜಿ ಚಿನ್ನವನ್ನು "ಕರಗಿಸಲು ಮತ್ತು ಶುದ್ಧೀಕರಿಸಲು" ಖಾಸಗಿ ಗುತ್ತಿಗೆದಾರನಿಗೆ ನೀಡಲಾಗಿತ್ತು. ಆದರೆ ಗುತ್ತಿಗೆದಾರರು ಹಿಂದಿರುಗಿಸಿದ್ದು ಕೆಲವ 637ಕೆ.ಜಿ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ. ಆಸ್ತಿಪತ್ರದ ಪೂರಕವಾದ ದಾಖಲೆಗಳನ್ನು ಒದಗಿಸದಿದ್ದಕ್ಕೆ, ದೇವಾಲಯದ ಆಡಳಿತ ಮಂಡಳಿಯಾದ ಟ್ರ್ಯಾವಂಕೋರ್ ರಾಜವಂಶವನ್ನು ಈ ವರದಿ ದೂರಿದೆ.
ಹಣಕಾಸಿನ ದಾಖಲೆಗಳು ತಿರುಚಲಾಗಿದೆ ಹಾಗೂ 2008-2009ರಲ್ಲಿ ದೇವಾಲಯ ಪಡೆದ ಚಿನ್ನ ಮತ್ತು ಬೆಳ್ಳಿಯ ದಾನದ ವಿವರವನ್ನು ದಾಖಲಿಸಿಲ್ಲ ಎಂದು ದೂರಿದೆ ವರದಿ.