ಚೆನ್ನೈ : ಅಕ್ರಮ ಟೆಲಿಫೋನ್ ಎಕ್ಸ್ ಚೇಂಜ್ ಸ್ಥಾಪನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ತ ಕಾರ್ಯದರ್ಶಿ ಸೇರಿದಂತೆ ಸಿಬಿಐ ಅಧಿಕಾರಿಗಳು ಮೂವರನ್ನು ಬಂಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್, ಸಿಬಿಐ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನ ಆರ್.ಎಸ್.ಎಸ್ ಮುಖಂಡರ ತೃಪ್ತಿಗಾಗಿ ಮೂವರನ್ನು ಬಂಧಿಸಲಾಗಿದೆ. ಬಂಧಿತರಿಗೆ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಸಿಬಿಐ ಇರುವುದು ಸತ್ಯವನ್ನು ಹೊರಹಾಕಲು ಹೊರತು ಈ ರೀತಿ ಹಿಂಸಿಸಲು ಅಲ್ಲ ಎಂದು ಗರಂ ಆಗಿದ್ದಾರೆ.
ಅಲ್ಲದೇ ನನ್ನ ವಿರುದ್ಧ ಹೇಳಿಕೆ ನೀಡುವಂತೆ ಬಂಧಿತರನ್ನು ಹಿಂಸಿಸಲಾಗಿದ್ದು, ಈ ಬಗ್ಗೆ ನಾನು ಸಿಬಿಐ ನಿರ್ದೇಶಕರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದ್ದಾರೆ.
300ಕ್ಕೂ ಹೆಚ್ಚು ಹೈಸ್ಪೀಡ್ ಟೆಲಿಫೋನ್ ಲೈನ್ ಗಳನ್ನು ಅಕ್ರಮವಾಗಿ ಸ್ಥಾಪನೆ ಮಾಡಿದ ಆರೋದ ಹಿನ್ನಲೆಯಲ್ಲಿ ದಯಾನಿಧಿ ಮಾರನ್ ಆಪ್ತ ಕಾರ್ಯದರ್ಶಿ ಗೌತಮನ್, ಎಸ್.ಕಣ್ಣನ್ ಹಾಗೂ ರವಿ ಎಂಬುವವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.