ಬೆಂಗಳೂರು : 'ಪಾಕಿಸ್ತಾನ' ಭಾರತದೊಂದಿಗೆ ಸೌಹಾರ್ದಯುತ ಸಂಬಂಧ ಮುಂದುವರೆಸಬೇಕಾದರೆ ಮೊದಲು ಮುಂಬೈ ದಾಳಿ ಉಗ್ರ ಝಾಕಿ-ಉರ್-ರೆಹಮಾನ್ ಲಖ್ವಿಯನ್ನು ಭಾರತಕ್ಕೆ ಒಪ್ಪಿಸಲಿ ಎಂದು ಯುಎಸ್, ಯುಕೆ ಪಾಕಿಸ್ತಾನಕ್ಕೆ ಸಲಹೆ ನೀಡಿದೆ.
ಲಖ್ವಿಯನ್ನು ಭಾರತಕ್ಕೆ ಒಪ್ಪಿಸಬೇಕೆಂದು ಎರಡು ರಾಷ್ಟ್ರಗಳು ಒತ್ತಾಯಿಸಿವೆ ಎಂದು ಲಖ್ವಿ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಹೇಳಿತ್ತು. ಆದರೆ ಯಾವ ದೇಶಗಳು ಎಂದು ಕೋರ್ಟ್ ತಿಳಿಸಿರಲಿಲ್ಲ.
ಲಖ್ವಿಯನ್ನು ಭಾರತದ ವಶಕ್ಕೆ ನೀಡಲು ಒತ್ತಡ ಹೇರುತ್ತಿರುವುದು ಯುಕೆ ಹಾಗೂ ಯುಎಸ್ ಎಂಬುದು ಇದೀಗ ಸ್ಪಷ್ಟವಾಗಿದ್ದು, ನವಾಜ್ ಶರೀಷ್ ಸರ್ಕಾರದ ಮೇಲೆ ತೀವ್ರ ಒತ್ತಡ ಉಂಟಾಗುತ್ತಿದೆ.
ಮುಂಬೈ ದಾಳಿಯ ಉಗ್ರನನ್ನು ಯಾವುದೇ ದೇಶಕ್ಕೆ ಒಪ್ಪಿಸುವುದು ರಾಜತಾಂತ್ರಿಕ ವಿಷಯವಾಗಿದ್ದು ಈ ವಿಷಯದಲ್ಲಿ ಕೋರ್ಟ್ ಏನು ಮಾಡುವುದಕ್ಕೂ ಸಾಧ್ಯವಿಲ್ಲ ಎಂದು ಹೇಳಿದೆ. ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಝಕಿ ಉರ್ ರೆಹಮಾನ್ ಲಖ್ವಿ ಬಂಧನ ಅವಧಿಯನ್ನು ಪಾಕಿಸ್ತಾನ ಸರ್ಕಾರ ಒಂದು ತಿಂಗಳು ವಿಸ್ತರಣೆ ಮಾಡಿತ್ತು. ಆದರೆ ಉಗ್ರನನ್ನು ಭಾರತದ ವಶಕ್ಕೆ ಒಪ್ಪಿಸುವ ಒತ್ತಡಕ್ಕೆ ಪಾಕಿಸ್ತಾನ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದು ಕಾದುನೋಡಬೇಕಿದೆ.