ನವದೆಹಲಿ : ಪಾಕಿಸ್ತಾನ ತನ್ನ ತಪ್ಪನ್ನು ಸರಿಪಡಿಸಿಕೊಳ್ಳದೇ ತನ್ನ ಉದ್ಧಟತನವನ್ನು ಮೆರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಎಷ್ಟೇ ಸಲ ಕದ್ದು ಮುಚ್ಚಿ ದಾಳಿ ಮಾಡಿದರೂ ಕೂಡಾ ನಾವು ಅದಕ್ಕೆ ತಕ್ಕ ಉತ್ತರ ನೀಡಿದ್ದೇವೆ. ಆದರೆ ಪಾಕಿಸ್ತಾನದ ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಾಕಿಸ್ತಾನ ಉಗ್ರರನ್ನು ಹತ್ತಿಕ್ಕುವ ಬದಲು ಪ್ರಚೋದನೆ ನೀಡುತ್ತಿದೆ ಎಂದು ಗುಡುಗಿದರು. ಉದ್ಧಟತನವನ್ನ ಬಿಡದ ಪಾಕ್, ತನ್ನ ಚಾಳಿಯನ್ನು ಮುಂದುವರೆಸಿದೆ. ಪಾಕ್ ಬೆದರಿಕೆಗೆ ಭಾರತ ಹೆದರಲ್ಲ ಎಂದು ತಿಳಿಸಿದರು.
ಗಣರಾಜ್ಯೋತ್ಸವದಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿ ಸಂಘಟನೆಗಳು ದಾಳಿ ನಡೆಸಲಿವೆ ಎಂಬ ಗುಪ್ತಚರ ಇಲಾಖೆಯ ಎಚ್ಚರಿಕೆ ಕುರಿತು ಕೇಳಿದ ಪ್ರಶ್ನೆಗೆ ಸಿಂಗ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಏನೇ ಆದರೂ ನಮ್ಮ ನೆಲದಲ್ಲಿ ಉಗ್ರರು ನಡೆಸಲು ರೂಪಿಸಿರುವ ಸಂಚನ್ನು ವಿಫಲಗೊಳಿಸಿ ಶಾಂತಿಯನ್ನು ಕದಡದಂತೆ ನೋಡಿಕೊಳ್ಳುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.