ನವದೆಹಲಿ : ಜನವರಿ 26ರ ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ಉಗ್ರರು ದೇಶದ ವಿವಿಧೆಡೆಗಳಲ್ಲಿ ದಾಳಿ ನಡೆಸಲು ಯೋಜಿಸಿದ್ದಾರೆ ಎಂಬ ಗುಪ್ತಚರ ಮಾಹಿತಿಗಳ ಹಿನ್ನಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇದಲ್ಲದೆ ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್ ವೀಕ್ಷಿಸಲು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ವಿಶೇಷ ಅತಿಥಿಯಾಗಿ ಭಾರತಕ್ಕೆ ಆಗಮಿಸುತ್ತಿರುವುದರಿಂದ ಸಹಜವಾಗಿಯೇ ಗುಪ್ತಚರ ಇಲಾಖೆ, ಭದ್ರತಾ ಪಡೆಗಳು ಮತ್ತು ಪೊಲೀಸ್ ಇಲಾಖೆಗಳ ಮೇಲೆ ಒತ್ತಡ ಅತಿಯಾಗಿದೆ.
ಇನ್ನು ಗಡಿಭಾಗದಲ್ಲಿ ದುಷ್ಕರ್ಮಿಗಳು ದಾಳಿನಡೆಸುವ ಸಾಧ್ಯತೆಗಳಿರುವುದರಿಂದ ಈ ಭಾಗಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.
ಈಗಾಗಲೇ ಗುಪ್ತಚರ ಇಲಾಖೆಗೆ ನೀಡಿರುವ ಮಾಹಿತಿಯಂತೆ ಸುಮಾರು 200 ಉಗ್ರರು ಗಡಿಭಾಗದಿಂದ ಭಾರತದೊಳಗೆ ನುಗ್ಗುವ ಹವಣಿಕೆಯಲ್ಲಿದ್ದಾರೆ ಎಂಬ ವಿಷಯ ನಿಜವಾಗಿಯೂ ಆತಂಕಕಾರಿಯಾಗಿದೆ.
ಹೈಪ್ರೊಫೈಲ್ ರಾಜಕೀಯ ನಾಯಕರೊಬ್ಬರು ಭಾರತದ ಗಣರಾಜ್ಯೋತ್ಸವ ಪೆರೇಡ್ ವೀಕ್ಷಣೆಗೆ ಆಗಮಿಸುತ್ತಿರುವುದು ಇದೇ ಮೊದಲಾಗಿರುವುದರಿಂದ ದೇಶಾದ್ಯಂತ ವಿಧ್ವಂಸಕ ಕೃತ್ಯಗಳ ಮೂಲಕ ಅಭದ್ರತೆಯ ಭಾವನೆ ಉಂಟುಮಾಡುವುದು ಉಗ್ರರ ಮೂಲ ಯೋಜನೆಯಾಗಿದೆ ಎನ್ನಲಾಗುತ್ತಿದೆ.