ನವದೆಹಲಿ : 'ಗುಪ್ತಚರ ಇಲಾಖೆ'ಯಲ್ಲಿ ಹೊಸ ತಂಡಗಳನ್ನು ರಚನೆ ಮಾಡುವ ಮೂಲಕ ಕೇಂದ್ರ ಸರ್ಕಾರ ಇಲಾಖೆಗೆ ಹೊಸ ರೂಪ ನೀಡಲು ಚಿಂತನೆ ನಡೆಸಿದೆ.
ಸೈಬರ್ ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸಲು ಕೇಂದ್ರ ಸರ್ಕಾರ ಗುಪ್ತಚರ ಇಲಾಖೆಯಲ್ಲಿ ಹೊಸ ತಂಡಗಳನ್ನು ರಚನೆ ಮಾಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಅವರ ಪ್ರಸ್ತಾವನೆ ಇದಾಗಿದ್ದು, ಹೊಸ ತಂಡಗಳನ್ನು ಪರಿಚಯಿಸುವ ಬಗ್ಗೆ ಪ್ರಧಾನಿಯೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ.
ನೂತನವಾಗಿ ಜಾರಿಗೆ ಬರಲಿರುವ ತಂಡದ ಕಾರ್ಯನೀತಿಗಳನ್ನು ಸಿದ್ಧಪಡಿಸುವಂತೆ ಈ ಹಿಂದೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸೂಚನೆ ನೀಡಾಲಾಗಿತ್ತು. ಆದರೆ ಇದೀಗ ಈ ಕೆಲಸವನ್ನು ನೇರವಾಗಿ ಪ್ರಧಾನಿ ಕಾರ್ಯಾಲಯದ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಭದ್ರತಾ ಮಂಡಳಿಯ ಕಛೇರಿಗೆ ವಹಿಸಲಾಗಿದೆ. ಗುಪ್ತಚರ ಇಲಾಖೆಯಲ್ಲಿ ಮತ್ತೊಂದು ವಿಭಾಗವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
ಹೊಸದಾಗಿ ಜಾರಿಗೆ ಬರಲಿರುವ ತಂಡ ಸೈಬರ್ ಭದ್ರತೆ ಸೇರಿದಂತೆ ಭಯೋತ್ಪಾದನೆಗೆ ಸಂಬಂಧಿಸಿದಂತೆ ತಂತ್ರಜ್ನಾನದಲ್ಲಿ ಎದುರಾಗುವ ಸಮಸ್ಯೆಗಳತ್ತ ಗಮನ ಹರಿಸಲಿದ್ದು ಸೈಬರ್ ಭಯೋತ್ಪಾದನೆ ನಿಗ್ರಹಕ್ಕಾಗಿ ಕಾರ್ಯನಿರ್ವಹಿಸಲಿದೆ.