BW News Bureau : ರಾಜ್ಯ ಸರ್ಕಾರದ ಸಹಯೋಗದೊಂದಿಗೆ 1.3 ಮಿ.ಟನ್ ಯೂರಿಯಾ ಉತ್ಪಾದಿಸುವ ಕಾರ್ಖಾನೆಯನ್ನು ಕರ್ನಾಟಕದಲ್ಲಿ ಪ್ರಾರಂಭಿಸಲಾಗುವುದೆಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ತಿಳಿಸಿದ್ದಾರೆ.
ಲಾಲ್ಬಾಗ್ನಲ್ಲಿ ಏರ್ಪಡಿಸಿದ್ದ ಹಾರ್ಟಿ ಸಂಗಮ 2015 ಅಂತಾರಾಜ್ಯ ತೋಟಗಾರಿಕಾ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೂರದ ಊರುಗಳಿಂದ ರಸಗೊಬ್ಬರನವನ್ನು ತರಿಸುವ ಬದಲು ಕರ್ನಾಟದಲ್ಲಿಯೇ ರಸಗೊಬ್ಬರ ಕಾರ್ಖಾನೆಯನ್ನು ನಿರ್ಮಾಣ ಮಾಡುವುದರ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ಕರ್ನಾಟಕದಲ್ಲಿ ಆಹಾರ ಸಂಸ್ಕರಣಾ ಘಟಕ ಮತ್ತು ತೋಟಗಾರಿಕೆ ಬೆಳೆಗಳಿಗೆ ಶೈತ್ಯಾಗಾರ ಹಾಗೂ ಮಾರುಕಟ್ಟೆ ಸಂಘ ರಚನೆಯಾಗಬೇಕಾಗಿದ್ದು ಇದರ ಸಂಬಂಧವಾಗಿ ಕೇಂದ್ರ ಹಣಕಾಸು ಸಚಿವಾಲಯದೊಂದಿಗೆ ಹಾಗೂ ಪ್ರಧಾನ ಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದೆಂದರು.
ಮಂಗಳೂರು ಕೆಮಿಕಲ್ ಫರ್ಟಿಲೈಸರ್ಸ್ ಲಿ. ಅನ್ನು ಪುನ: ಪ್ರಾರಂಭ ಮಾಡುವುದರ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ತೀರ್ಮಾನ ಕೈಗೊಂಡಿದೆ. ಇದರ ಸಂಬಂಧವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ಇನ್ನು ಮುಂದೆ ದೇಶದಲ್ಲಿ ಕೇವಲ ಯೂರಿಯಾ ದೊರೆಯುವುದಿಲ್ಲ. ಬೇವು ಲೇಪಿತ ಯೂರಿಯಾ ಸಿಗಲಿದೆ ಎಂದರು. ಇದರಿಂದ ಸುಮಾರು ಶೇ. 15 ರಷ್ಟು ಕಡಿಮೆ ಯೂರಿಯಾ ಬಳಕೆ ಮಾಡಬಹುದು ಮತ್ತು ಹೆಚ್ಚು ಇಳುವರಿ ಪಡೆಯಬಹುದುದೆಂದು ತಿಳಿಸುತ್ತಾ ಇದು ಕ್ರಾಂತಿಕಾರಿ ಹೆಜ್ಜೆಯಾಗಲಿದೆಯೆಂದರು ಭಾರತ ದೇಶಕ್ಕೆ ಬೇವು ಲೇಪಿತ ಯೂರಿಯ ಬಳಸುವುದರಿಂದ ಸುಮಾರು 10,000 ಕೋಟಿ ರೂ. ಲಾಭ ದೊರೆಯಲಿದೆ ಎಂದರು.