ಲಖ್ನೌ : 'ಉತ್ತರ ಪ್ರದೇಶ'ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಸಮಾಜವಾದಿ ಪಕ್ಷದ ಸಂಸದ ಚೌಧರಿ ಮುನವ್ವಾರ್ ಸಲೀಮ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ಹೇಳಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ ಸಲೀಮ್, ಉತ್ತರ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣವಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಾಮಮಂದಿರಗಳನ್ನು ಹಿಂದೂಸ್ಥಾನದಲ್ಲಿ ನಿರ್ಮಿಸದೇ ಮತ್ತೆಲ್ಲಿ ನಿರ್ಮಿಸಲು ಸಾಧ್ಯ ಎಂದು ಸಲೀಂ ಪ್ರಶ್ನಿಸಿದ್ದಾರೆ. ಮಧ್ಯಪ್ರದೇಶದ ವಿದಿಶಾ ಮೂಲದ ಸಲೀಮ್ ಅವರನ್ನು 2012ರಲ್ಲಿ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಮಾಡಿತ್ತು.
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ಸಲೀಮ್ ಅವರನ್ನು ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಆಜಂ ಘರ್, ಹಥ್ರಾಸ್, ಇಟಾಹ್ ಜಿಲ್ಲೆಗಳಿಗೆ ಉಸ್ತುವಾರಿಯನ್ನಾಗಿ ನೇಮಿಸಿದ್ದರು. ಸಲೀಮ್ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮೀಕಾಂತ್ ಭಾಜಪೇಯಿ ಅವರು ಸ್ವಾಗತಿಸಿದ್ದಾರೆ.
ಸಲೀಮ್ ಅವರು ಈ ಹೇಳಿಕೆ ನೀಡುವುದಕ್ಕಿಂತ ಮುನ್ನ ಆಜಂ ಖಾನ್ ಅನುಮತಿ ಪಡೆದಿದ್ದಾರೆಯೇ ಎಂದು ಲಕ್ಷ್ಮೀಕಾಂತ್ ಭಾಜಪೇಯಿ ಪ್ರಶ್ನಿಸಿದ್ದಾರೆ.