ನವದೆಹಲಿ : ಮುಂಬೈ ದಾಳಿಯ ರೂವಾರಿ, ಲಷ್ಕರ್ ಎ ತಯ್ಯಬಾ ಸಂಸ್ಥಾಪಕ ಹಫೀಜ್ ಸಯೀದ್ ಕಳೆದ ಶನಿವಾರ ಭಾರತ-ಪಾಕ್ ಗಡಿಯಲ್ಲಿ ಗುಂಡಿನ ಚಕಮಕಿ ನಡೆಯುತ್ತಿದ್ದ ವೇಳೆ ಜಮ್ಮು ಕಾಶ್ಮೀರದ ಸಾಂಬಾ ವಲಯದ ಆಚೆಗಿರುವ ಪಾಕಿಸ್ಥಾನೀ ರೇಂಜರ್ಗಳ ಗಡಿ ಹೊರ ಠಾಣೆಯಲ್ಲಿ ಕಾಣಿಸಿಕೊಂಡಿದ್ದ ಎಂಬ ಮಾಹತಿ ಬಹಿರಂಗಗೊಂಡಿದೆ.
ಭಾರತ-ಪಾಕ್ ಗಡಿಯಲ್ಲಿ ಸಯೀದ್ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. ಕಳೆದ ವರ್ಷ ಹಫೀಜ್ ಸಯೀದ್ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಯ ಉದ್ದಕ್ಕೂ ಆಚೆ ಬದಿಯಲ್ಲಿ ಇರುವ ಅನೇಕ ಪಾಕ್ ಆಕ್ರಮಿತ ಸ್ಥಳಗಳಲ್ಲಿ ಕಾಣಿಸಿಕೊಂಡದ್ದಲ್ಲದೇ ಅಲ್ಲಿ ಅನೇಕ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡು ಭಾರತ ವಿರೋಧಿ ಭಾವನೆಗಳನ್ನು ಪ್ರಚುರ ಪಡಿಸಿದ್ದ.
ಶನಿವಾರ ಸಂಜೆಯ ಬಳಿಕ ಸೋಮವಾರ ಬೆಳಗ್ಗಿನ ತನಕ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಪಡೆಗಳು ಯಾವುದೇ ಉಲ್ಲಂಘನೆ ಮಾಡಿಲ್ಲ; ಗುಂಡಿನ ದಾಳಿ ನಡೆಸಿಲ್ಲ. ಸಾಂಬಾ ವಲಯದಲ್ಲಿ ಭಾರತೀಯ ಗಡಿ ರಕ್ಷಣ ಹೊರ ಠಾಣೆ ಇರುವಲ್ಲಿಂದ ಕೇವಲ 500 ಮೀಟರ್ ಆಚೆಗಿನ ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ಹಫೀಜ್ ಸಯೀದ ಇರುವ ವಾಹನವೊಂದು ಅತ್ತಿಂದಿತ್ತ ಸಂಚರಿಸುತ್ತಿರುವುದು ಹಾಗೂ ಹಫೀಜ್ ಸಯೀದ್ ಜಿಂದಾಬಾದ್ ಎಂಬ ಘೋಷಣೆಗಳು ಕೇಳಿ ಬರುತ್ತಿರುವುದನ್ನು ಭಾರತೀಯ ಗಡಿ ಯೋಧರು ಗಮನಿಸಿದ್ದಾರೆ.