ಶೃಂಗೇರಿ : 'ಶೃಂಗೇರಿ' ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮಿಗಳು ತಮ್ಮ ಉತ್ತರಾಧಿಕಾರಿಯನ್ನು ಘೋಷಿಸಿದ್ದು, ಶಿಷ್ಯ ಸ್ವೀಕಾರ ಸಮಾರಂಭ ಜ.22, 23ರಂದು ನಡೆಯಲಿದೆ.
ಭಾರತೀ ತೀರ್ಥ ಸ್ವಾಮಿಗಳವರ ಪೀಠಾರೋಹಣದ ರಜತ ಮಹೋತ್ಸವದ ಅಂಗವಾಗಿ ಜ.4ರಂದು ಶೃಂಗೇರಿಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುವ ವೇಳೆ ಶೃಂಗೇರಿ ಜಗದ್ಗುರುಗಳು ಉತ್ತರಾಧಿಕಾರಿಯನ್ನು ಘೋಷಿಸಿದ್ದಾರೆ. ಕುಪ್ಪಾ ವೆಂಕಟೇಶ್ ಪ್ರಸಾದ್ ಶರ್ಮ ಶೃಂಗೇರಿ ಶಂಕರಾಚಾರ್ಯ ಪೀಠದ ಉತ್ತರಾಧಿಕಾರಿಯ ಹೆಸರಾಗಿದೆ.
"ನಮ್ಮ ಗುರುಗಳು 57ನೇ ವಯಸ್ಸಿನಲ್ಲಿಯೇ ಶಿಷ್ಯ ಸ್ವೀಕಾರ ಮಾಡಿದ್ದರು. ಹಾಗೆಯೇ ತಾವು 64ನೇ ವಯಸ್ಸಿನಲ್ಲಿ ಶಿಷ್ಯ ಸ್ವೀಕಾರ ಮಾಡುತ್ತಿದ್ದೇವೆ. ಇದನ್ನು ಸಭಾ ಮಂಟಪದಲ್ಲೇ ಹೇಳುವುದು ಸೂಕ್ತ ಜಗನ್ಮಾತೆ ಶಾರದಾಂಬೆ ನಮಗೆ ಉತ್ತಮ ಶಿಷ್ಯರನ್ನು ಕರುಣಿಸಿದ್ದಾರೆ ಭಕ್ತರೂ ಅವರನ್ನು ಸ್ವೀಕರಿಸಬೇಕು ಎಂಬುದು ತಮ್ಮ ಅಗ್ರಹ ಎಂದರು.
ಶಿಷ್ಯರು ಗುರುಗಳನ್ನು ಪರೀಕ್ಷೆ ಮಾಡುವುದನ್ನು ನಿಲ್ಲಿಸಬೇಕು ಕೆಲವರು ಕುತೂಹಲಕ್ಕಾಗಿ ಗುರುಗಳನ್ನು ಪರೀಕ್ಷಿಸುತ್ತಾರೆ. ಇದು ಸಲ್ಲದು. ಶೃಂಗೇರಿ ಮಠದಲ್ಲಿನ ಗುರು-ಶಿಷ್ಯ ಪರಂಪರೆ ಅತ್ಯಂತ ವಿಶಿಷ್ಟವಾದದ್ದು ಇದಕ್ಕೆ ಪ್ರಮುಖ ಕಾರಣ ತಾಯಿ ಶಾರದೆಯ ಅನುಗ್ರಹ ಎಂದು ಭಾರತೀ ತೀರ್ಥ ಸ್ವಾಮಿಗಳು ಹೇಳಿದ್ದಾರೆ.
21 ವರ್ಷದ ವೆಂಕಟೇಶ್ ಪ್ರಸಾದ್ ಶರ್ಮ, ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾಗಿದ್ದು ಶೃಂಗೇರಿಯಲ್ಲಿ ವೇದಾಭ್ಯಾಸ ಮಾಡಿದ್ದಾರೆ.