Rajajinagar : 'ಕಲಾ ವಿಮರ್ಶಕ' ಡಾ.ಎಂ ಸೂರ್ಯಪ್ರಸಾದ್ ಅವರು ಓರ್ವ ಅದ್ಭುತ ಸಂಘಟನಾಕಾರ ಹಾಗೂ ಭಾಷಣಕಾರರೂ ಹೌದು ಎಂದು ಕಲಾ ವಿಮರ್ಶಕ ರಾಮಮೂರ್ತಿ ರಾವ್ ಅಭಿಪ್ರಾಯಪಟ್ಟರು.
ಏ.26ರಂದು ಬೆಂಗಳೂರಿನ ಬಸವೇಶ್ವರ ನಗರದ ಶೃಂಗೇರಿ ಆವನಿ ಮಠದಲ್ಲಿ ನಡೆದ ಕಲಾವಿಮರ್ಶಕ ಡಾ.ಎಂ ಸೂರ್ಯಪ್ರಸಾದ್ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ರಾಮಮೂರ್ತಿ ರಾವ್, ಕಲಾವಿದರಿಗೆ ಸಿಗುವ ಅಭಿನಂದನೆಗಳು, ಜನಪ್ರಿಯತೆ ಕಲಾವಿಮರ್ಶಕರಿಗೆ ಸಿಗುವುದಿಲ್ಲ. ಆದರೆ ಒಬ್ಬ ಪ್ರೇಕ್ಷಕನಾಗಿ ಕಾರ್ಯಕ್ರಮವನ್ನು ವೀಕ್ಷಿಸಿ ಕಲಾವಿದರ ಮನಸ್ಸಿಗೆ ನೋವಾಗದಂತೆ ಕಾರ್ಯಕ್ರಮದಲ್ಲಿ ನಡೆದ ಸರಿ-ತಪ್ಪುಗಳನ್ನು ಸೂಕ್ಷ್ಮವಾಗಿ ವಿಮರ್ಶಿಸುವ ಗುರುತರ ಜವಾಬ್ದಾರಿ ಕಲಾವಿಮರ್ಶಕರಿಗಿರುತ್ತದೆ. ಅಂತಹ ಜವಾಬ್ದಾರಿಯನ್ನು ಡಾ.ಎಂ ಸೂರ್ಯಪ್ರಸಾದ್ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಸೂರ್ಯ ಪ್ರಸಾದ್ ಅವರದ್ದು, ಯಾವುದೇ ರೀತಿಯ ಹಮ್ಮು-ಬಿಮ್ಮುಗಳಿಲ್ಲದ ನಿಗರ್ವಿ ವ್ಯಕ್ತಿತ್ವ, ಅವರು ಕೇವಲ ಕಲಾವಿಮರ್ಶಕರಾಗಿ ಮಾತ್ರ ಅಲ್ಲದೇ ಓರ್ವ ಅದ್ಭುತ ಸಂಘಟಕರೂ ಹೌದು, ಮೈಸೂರಿನಲ್ಲಿ ಕೆಲ ವರ್ಷಗಳ ಹಿಂದೆ ನಡೆದ ನೃತ್ಯ ಕಲಾವಿದರ ಸಂಘಟನೆಯಿಂದ ಆಯೋಜಿಸಲಾಗಿದ್ದ ಸಮಾರಂಭ ಯಶಸ್ವಿಗೊಳ್ಳಲು ಕಾರಣರಾದ ಧೀಶಕ್ತಿ ಎಂದು ರಾಮಮೂರ್ತಿ ರಾವ್ ಸೂರ್ಯಪ್ರಸಾದ್ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರು.
ಇದೇ ವೇಳೆ ಮಾತನಾಡಿದ ಮತ್ತೋರ್ವ ಹಿರಿಯ ಕಲಾ ವಿಮರ್ಶಕರಾದ ಈಶ್ವರಯ್ಯ, ಮಾಧ್ಯಮಗಳು ರಾಜಕೀಯ ಸಮಾಜಿಕ ಜಾಗೃತಿ ಮೂಡಿಸುತ್ತಿವೆ. ಆದರೆ ಸಾಂಸ್ಕೃತಿಕ ಜಾಗೃತಿಯನ್ನೂ ಮೂಡಿಸಬೇಕಿದೆ. ಸಾಂಸ್ಕೃತಿಕ ಜಾಗೃತಿ ಮೂಡಿಸುವಲ್ಲಿ ಕಲಾ ವಿಮರ್ಶಕರ ಪಾತ್ರ ಬಹು ಮುಖ್ಯವಾದದ್ದು ಎಂದು ಹೇಳಿದ್ದಾರೆ. ಕಲಾವಿಮರ್ಶಕರು ಎಂದಿಗೂ ಚಿರ ಯುವಕರಾಗಿಯೇ ಇರುತ್ತಾರೆ. ಕಲಾವಿಮರ್ಶಕರಾಗಿ ಡಾ.ಸೂರ್ಯಪ್ರಸಾದ್, ವಿಮರ್ಶೆಗಳ ಮೂಲಕ ಮತ್ತಷ್ಟು ಕಲಾವಿದರನ್ನು ಪ್ರೋತ್ಸಾಹಿಸಲಿ ಎಂದು ಈಶ್ವರಯ್ಯ ಅಭಿನಂದನೆ ಸಲ್ಲಿಸಿದರು.
ಗಾಯನ ಸಮಾಜ, ಗಮಕ ಕಲಾ ಪರಿಷತ್ ನ ಪ್ರಥಮ ಸಮ್ಮೇಳನದಲ್ಲಿ ತಮ್ಮ ತಂದೆಯ ಸಂದರ್ಶನವನ್ನು ನಡೆಸಿ ಲೇಖನ ಬರೆಯುವ ಮೂಲಕ ಡಾ.ಸೂರ್ಯಪ್ರಸಾದ್ ಅವರು ವಿಮರ್ಶಾ ಕ್ಷೇತ್ರಕ್ಕೆ ಪ್ರವೇಶಿಸಿದ್ದನ್ನು ಸ್ಮರಿಸಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಕಲಾವಿಮರ್ಶಕರಾದ ಎಂ.ಎ ಜಯರಾಮ್ ರಾವ್ ಸ್ಮರಿಸಿದರು. ಡಾ.ಸೂರ್ಯಪ್ರಸಾದ್ ಅವರಿಗೆ ಸನ್ಮಾನ ಮಾಡುವ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿಮರ್ಶಕರನ್ನೂ ಗುರುತಿಸಿ, ಅವರಿಗೂ ಸನ್ಮಾನ ಮಾಡುವ ಸೂಕ್ಷ್ಮ ಸಂವೇದನೆಯನ್ನು ವೇದಿಯಲ್ಲಿದ್ದ ಎಲ್ಲಾ ಹಿರಿಯ ಕಲಾ ವಿಮರ್ಶಕರೂ ಶ್ಲಾಘಿಸಿದರು. ಸನ್ಮಾನ ಕಾರ್ಯಕ್ರಮದಲ್ಲಿ ಶೃಂಗೇರಿ ಆವನಿ ಜಗದ್ಗುರುಗಳಾದ ಶ್ರೀ ಅಭಿನವ ವಿದ್ಯಾಶಂಕರ ಭಾರತೀ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದು ವಿಶೇಷವಾಗಿತ್ತು.