ನವದೆಹಲಿ : ಶಸ್ತ್ರಸಜ್ಜಿತ ಸುಮಾರು 50 ರಿಂದ 60 ಉಗ್ರರು ಗಡಿ ನಿಯಂತ್ರಣ ರೇಖೆ ಬಳಿ ಭಾರತದೊಳಗೆ ನುಸುಳಲು ಹೊಂಚು ಹಾಕಿದ್ದು, ಗಡಿ ಭಾಗದಲ್ಲಿ ಬೀಡೂರಿದ್ದಾರೆ ಎಂದು ತಿಳಿದುಬಂದಿದೆ.
ಭಾರತದ ಗಡಿಯಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗಡಿ ಭದ್ರತಾ ದಳದ ಇನ್ಸ್ಪೆಕ್ಟರ್ ರಾಕೇಶ್ ಶರ್ಮಾ ಹೇಳಿದ್ದಾರೆ.
ಪಾಕಿಸ್ತಾನದ ಗಡಿಯಿಂದ ಭಾರತದ ಗಡಿಯೊಳಗೆ ನುಸುಳಲು 50-60 ಉಗ್ರರು ಹೊಂಚು ಹಾಕುತ್ತಿದ್ದಾರೆ. ಭಾರತದ ಮೇಲೆ ದಾಳಿ ನಡೆಸಲು 150ರಿಂದ 170 ಉಗ್ರರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.
ಒಂದು ಕಡೆ ಪಾಕಿಸ್ತಾನ ಸೇನಾ ಪಡೆ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತದ ಮೇಲೆ ಗುಂಡಿ ದಾಳಿ ನಡೆಸುತ್ತಿದ್ದರೆ, ಮತ್ತೊಂದು ಕಡೆ, ಅದೇ ಪಾಕ್ ನೆಲೆಯಲ್ಲಿ ಉಗ್ರರಿಗೆ ತರಬೇತಿ ನೀಡಿ, ಭಾರತದೊಳಗೆ ನುಸುಳುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಮಂಜು ಬೀಳುತ್ತಿದ್ದು, ಈ ಸಮಯದಲ್ಲಿ ಕಾಶ್ಮೀರದೊಳಗೆ ನುಸುಳಿ ಇಡೀ ಪ್ರದೇಶವನ್ನೇ ಆಕ್ರಮಣ ಮಾಡಿ ತನ್ನದಾಗಿಸಿಕೊಳ್ಳುವ ತಂತ್ರವನ್ನು ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆ ರೂಪಿಸಿದೆ.ಭಾರತಕ್ಕೆ ಜನವರಿ 26ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಮಾ ಭೇಟಿ ನೀಡುವುದನ್ನೇ ಕಾಯುತ್ತಿರುವ ಉಗ್ರರು ಯಾವುದೇ ಸಂದರ್ಭದಲ್ಲಿ ಭಾರತದ ಮೇಲೆ ದಾಳಿ ನಡೆಸಬಹುದು ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.