ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷರಾಗಿ ಹಲವು ಸಾಧನೆಗಳ ಮೂಲಕ ವಿಶ್ವಮಟ್ಟದಲ್ಲಿ ಇಸ್ರೋ ಕೀರ್ತಿ ಪತಾಕೆಗಳನ್ನು ಹಾರಿಸಿದ್ದ ಕೆ.ರಾಧಾಕೃಷ್ಣನ್ ನಿವೃತ್ತಿ ಹೊಂದಿದ್ದಾರೆ.
ಅವರು ಮಂಗಳ ಗ್ರಹ ಶೋಧಕ ಉಪ್ರಗ್ರಹ ಸೇರಿದಂತೆ ಹಲವು ಸ್ವದೇಶಿ ಉಪಗ್ರಹಗಳ ಉಡಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರನ್ನು 'ಉಕ್ಕಿನ ಮನುಷ್ಯ' ಎಂದು ಇಸ್ರೋ ಬಣ್ಣಿಸುವ ಮೂಲಕ ಭಾವೋದ್ವೇಗದ ಬೀಳ್ಕೊಡುಗೆ ನೀಡಿತು. ಅಕ್ಟೋಬರ್ 30 2009ರಂದು ಇಸ್ರೋ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಾಧಾಕೃಷ್ಣನ್ ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುವಂತೆ ಮಾಡಿದರು.
ರಾಧಾಕೃಷ್ಣನ್ ಅವರ ನಿವೃತ್ತಿ ಅವಧಿ 2014ರ ಆಗಸ್ಟ್ ತಿಂಗಳಲ್ಲೇ ಮುಕ್ತಾಯವಾಗಿತ್ತು. 'ಕ್ರಿಯಾತ್ಮಕ ಆಧಾರ ಹಾಗೂ ಸಾರ್ವಜನಿಕ ಹಿತದೃಷ್ಟಿ' ಉದ್ದೇಶದಿಂದ ಅವರನ್ನು ಡಿ.31ರವರೆಗೆ ಮುಂದುವರೆಸಲಾಗಿತ್ತು.
ಉತ್ತಮ ಕಥಕ್ಕಳಿ ನರ್ತಕರಾಗಿರುವ ರಾಧಾಕೃಷ್ಣನ್ ನಿವೃತ್ತಿ ಜೀವನವನ್ನು ಕಥಕ್ಕಳಿ ಮೂಲಕ ಕಳೆವ ಆಶೆ ಹೊಂದಿದ್ದಾರೆ.
ರಾಧಾಕೃಷ್ಣನ್ ಸಾಧನೆ-
* ಕೇವಲ 450 ಕೋಟಿ ರೂ.ವೆಚ್ಚದಲ್ಲಿ ಮಂಗಳ ಶೋಧಕ ಉಪಗ್ರಹವನ್ನು ಮೊದಲ ಯತ್ನದಲ್ಲೇ ಸೆ. 24ರಂದು ಮಂಗಳ ಗ್ರಹದ ಕಕ್ಷೆಗೆ ಯಶಸ್ವಿಯಾಗಿ ಸೇರಿವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
* ಸ್ವದೇಶಿ ಜಿಎಸ್ಎಲ್ವಿ, ಪಿಎಸ್ಎಲ್ವಿ, ಇನ್ಸ್ಯಾಟ್, ಜಿಸ್ಯಾಟ್ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲು ಕಾರಣಕರ್ತರಾಗಿದ್ದರು.
* ಭಾರತೀಯ ಸುನಾಮಿ ಮುಂಜಾಗ್ರತಾ ಕೇಂದ್ರವನ್ನು ಸ್ಥಾಪನೆ ಮಾಡಿದ್ದರು.
* ಮಾನವ ಸಹಿತ ವ್ಯೋಮನೌಕೆಯ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆ
ಭೂ ವಿಜ್ಞಾನ ಸಚಿವಾಲಯದ ಕಾಯದರ್ಶಿಯಾಗಿರುವ ಶೈಲೇಶ್ ನಾಯಕ್ ಅವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆಯ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹೊಸ ಅಧ್ಯಕ್ಷರು ಆಯ್ಕೆಯಾಗದ ಕಾರಣ, ಅವರ ಆಯ್ಕೆಯಾಗುವರೆಗೆ ಒಂದು ತಿಂಗಳ ಮಟ್ಟಿಗೆ ನಾಯಕ್ ಈ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. 61 ವರ್ಷದ ಶೈಲೇಶ್ ನಾಯಕ್ 2000ನೇ ಇಸವಿಗೂ ಮುನ್ನ ಇಸ್ರೋದಲ್ಲಿದ್ದರು.