ಬೆಂಗಳೂರು : ನ್ಯಾಯಾಲಯದ ಆದೇಶದಂತೆ ನಿಗದಿತ ಅವಧಿಯಲ್ಲಿ ಕಾಂಗ್ರೆಸ್ಗೆ ಜೆಡಿಎಸ್ ಕಚೇರಿಯನ್ನು ಬಿಟ್ಟುಕೊಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.31ಕ್ಕೆ ಜೆಡಿಎಸ್ ಕಚೇರಿಯನ್ನು ತೆರವು ಮಾಡಿ ಕಾಂಗ್ರೆಸ್ಗೆ ಬಿಟ್ಟುಕೊಡಬೇಕು ಎಂದು ನ್ಯಾಯಾಲಯದ ಆದೇಶವಿದೆ. ಅದರಂತೆ ಜೆಡಿಎಸ್ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಡೆದುಕೊಳ್ಳಬೇಕು. ಇಲ್ಲದೇ ಹೋದರೆ ಮತ್ತೆ ನಾವು ಕಾನೂನು ಹೋರಾಟ ಮುಂದುವರೆಸಬೇಕಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಅವರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕಲ್ಲಿದ್ದಲು ಹಗರಣ ಕುರಿತು ಆರೋಪ ಮಾಡಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಹಿರೇಮಠ್ ಅವರಿಗೆ ಸರ್ಕಾರ ಹಾಗೂ ಕಾನೂನು ವ್ಯವಸ್ಥೆ ಗೊತ್ತಿದೆ. ಯಾವುದೇ ಹಗರಣವಾದರೂ ತನಿಖೆ ಮಾಡಲು ಲೋಕಾಯುಕ್ತ ಸಂಸ್ಥೆ ಇದೆ. ಅವರ ಬಳಿ ದಾಖಲೆ ಇದ್ದರೆ ದೂರು ನೀಡಲಿ. ಅದನ್ನು ಬಿಟ್ಟು ಸರ್ಕಾರದ ಸಚಿವರನ್ನು ಗುರಿಯಾಗಿಟ್ಟುಕೊಂಡು ಪದೇ ಪದೇ ಆರೋಪ ಮಾಡಿರುವುದು ಸರಿಯಲ್ಲ ಎಂದರು.
ಮಠಗಳನ್ನು ನಿಯಂತ್ರಿಸುವ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮದಾಯ ತಿದ್ದುಪಡಿ ತಂದಿರುವುದು ರಾಜ್ಯ ಸರ್ಕಾರ. ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಕಾಯ್ದೆ ರೂಪಿಸುವಾಗ ಸರ್ಕಾರ ನಮ್ಮ ಗಮನಕ್ಕೆ ತಂದಿಲ್ಲ. ವಾಪಸ್ ಪಡೆಯುವಾಗಲೂ ನಮಗೆ ಹೇಳಿಲ್ಲ. ಇದು ಸಂಪೂರ್ಣ ಸರ್ಕಾರದ ನಿರ್ಧಾರ ಎಂದು ತಿಳಿಸಿದರು.