ಮೈಸೂರು : 'ಮೈಸೂರು ರಾಜವಂಶ'ಕ್ಕೆ ಶೀಘ್ರವೇ ಉತ್ತರಾಧಿಕಾರಿ ನೇಮಕ ನಡೆಯಲಿದೆ. ಜಯಚಾಮರಾಜ ಒಡೆಯರ್ ಅವರ ಪುತ್ರಿ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ಗಾಯತ್ರಿದೇವಿ ಅವರ ಮಗಳ ಮಗ ಯದುವೀರ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸುವುದು ಬಹುತೇಕ ಖಚಿತವಾಗಿದೆ.
ಗಾಯತ್ರಿದೇವಿ ಅವರ ಮೊದಲ ಮಗಳಾದ ಲೀಲಾ- ಸ್ವರೋಪ್ ದಂಪತಿಯ ಮೊದಲ ಮಗ ಯದುವೀರ್. ಇವರು ವಿದೇಶದಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಳೆದ ವರ್ಷದ ಡಿ.10ರಂದು ನಿಧನದ ಬಳಿಕ ಉತ್ತರಾಧಿಕಾರಿ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಒಡೆಯರ್ ಅವರ ಉತ್ತರ ಕ್ರಿಯೆಗಳನ್ನು ನೆರವೇರಿಸಿದ್ದ ಚದುರಂಗ ಕಾಂತರಾಜ ಅರಸ್ ಅವರೇ ಯದುವಂಶದ ಮುಂದಿನ ಉತ್ತರಾಧಿಕಾರಿ ಎಂದು ಹೇಳಲಾಗಿತ್ತು. ಆದರೆ ಈಗ ಕಾಂತರಾಜ್ ಅರಸ್ ಅವರ ಸಹೋದರಿಯ ಪುತ್ರನನ್ನು ಒಡೆಯರ್ ವಂಶಕ್ಕೆ ದತ್ತು ಪಡೆಯಲು ಸಿದ್ಧತೆ ನಡೆದಿವೆ.
ಯದುವಂಶದ ನಿಯಮದಂತೆಯೇ ಉತ್ತರಾಧಿಕಾರಿ ನೇಮಕ ಆಗಬೇಕು. ಚದುರಂಗ ಕಾಂತರಾಜ ಅರಸ್ ಗೆ ಈಗಗಾಲೇ ಮದುವೆ ಆಗಿರುವುದರಿಂದ ನಿಯಮದಂತೆ ಅವರು ಉತ್ತರಾಧಿಕಾರಿಯಾಗಲು ಅರ್ಹರಲ್ಲ ಎಂಬ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಪ್ರಮೋದಾದೇವಿ ಒಡೆಯರ್ ಅವರು ಯದುವೀರ ಅವರನ್ನೇ ಉತ್ತರಾಧಿಕಾರಿ ಸ್ಥಾನಕ್ಕೆ ನೇಮಿಸುವ ಒಲವು ವ್ಯಕ್ತಪಡಿಸಿದ್ದಾರೆ.